ಶಿರ್ವದಲ್ಲಿ ನೈಸರ್ಗಿಕ ಭತ್ತದ ಕೃಷಿ ಕ್ಷೇತ್ರೋತ್ಸವ
ಶಿರ್ವ, ನ.7: ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆ ಅಡಿ ಯಲ್ಲಿ ನೈಸರ್ಗಿಕ ಭತ್ತದ ಕೃಷಿ ಕ್ಷೇತ್ರೋತ್ಸವವನ್ನು ಶಿರ್ವ ಪ್ರಗತಿಪರ ಕೃಷಿಕ ಬಲ್ಲಾಡಿ ವ್ಯಾಸರಾಯ ನಾಯಕ್ ಮನೆಯ ವಠಾರದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ತಾಪಂ ಸದಸ್ಯೆ ಬಂಟಕಲ್ಲು ಗೀತಾ ವಾಗ್ಲೆ ಮಾತನಾಡಿ, ಉತ್ತಮ ಕೃಷಿಗೆ ಶ್ರದ್ಧೆ ಮತ್ತು ಆಸಕ್ತಿ ಅತ್ಯಗತ್ಯ. ರೈತರು ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಇಲಾಖೆಯೊಂದಿಗೆ ನಿಕಟ ಸಂಪರ್ಕ ಹೊಂದಿದಲ್ಲಿ ಹಲವಾರು ಉಪಯುಕ್ತ ಯೋಜನೆಗಳ ಪ್ರಯೋಜನ ಪಡೆಯು ವಲ್ಲಿ ಸಕಾರಿಯಾಗುತ್ತದೆ ಎಂದು ಹೇಳಿದರು.
ಕೇಂದ್ರದ ಹಿರಿಯ ವಿಜ್ಞಾನಿ ವಿ.ಆರ್.ವಿನೋದ್ ಮಾತನಾಡಿ, ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆಗೆ ಒಳಪಟ್ಟ ರೈತರು ನಿಖರ ಅಂಕಿ ಅಂಶಗಳನ್ನು ನೀಡಿದರೆ ಇತರ ರೈತರು ಯೋಜನೆ ಅಳವಡಿಸಿಕೊಳ್ಳಲು ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಕೃಷಿಕ ಫಿಲಿಪ್ ಜಾಕೋಬ್ ಅವರಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಸಹಾಯಕ ಕೃಷಿ ಅಧಿಕಾರಿ ಪುಷ್ಪ ಲತಾ ಮತ್ತು ಶೇಖರ ರೈತರಿಗೆ ಮಾದರಿ ಮಣ್ಣು ಪರೀಕ್ಷೆ ಚೀಟಿ ವಿತರಿಸಿದರು.
ಯೋಜನೆಯ ಮುಖ್ಯಸ್ಥ ಡಾ.ಕೆ.ವಿ.ಸುಧೀರ್ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷಿ ಅನವುಗಾರ ರಾಘವೇಂದ್ರ ನಾಯಕ್ ಸ್ವಾಗತಿಸಿದರು. ಡಾ.ಮಧು ರೀಮಾ ವಿನೋದ್, ಡಾ.ಬಸಮ್ಮ ಹಾದಿಮನಿ ಸಹಕರಿಸಿದರು. ಡಾ.ಸುನಿಲ್ ಕುಮಾರ್ ಕೆ. ಕಾರ್ಯಕ್ರಮ ನಿರೂಪಿಸಿದರು. ಸುರೇಶ್ ವಂದಿಸಿದರು.