ಪೇಜಾವರಶ್ರೀ ನೇತೃತ್ವದಲ್ಲಿ ಸ್ವಾಮೀಜಿಗಳ ಭಜನೆ
ಉಡುಪಿ, ನ.8: ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನಡೆಯುತ್ತಿರುವ ಅಖಂಡ ಭಜನಾ ಕಾರ್ಯಕ್ರಮದಲ್ಲಿ ಗುರುವಾರ ರಾತ್ರಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥರ ನೇತೃತ್ವದಲ್ಲಿ ಹತ್ತಕ್ಕೂ ಅಧಿಕ ಮಠಾಧೀಶರು ಹರಿನಾಮ ಸಂಕೀರ್ತನೆಗಳನ್ನು ಹಾಡಿದರು.
‘ವಂದಿಪೆ ನಿನಗೆ ಗಣನಾಥ...’ದಿಂದ ಪ್ರಾರಂಭಿಸಿ ಪ್ರತಿನಿತ್ಯ ಮನೆಗಳಲ್ಲಿ ಹಾಡುವ ದಾಸರ ಕೀರ್ತನೆ ಹಾಗೂ ಭಜನೆಗಳನ್ನು ಇವರೆಲ್ಲರೂ ಏಕಕಂಠದಿಂದ ಹಾಡಿದರು. ದೊಡ್ಡ ಸಂಖ್ಯೆಯ ಭಕ್ತರು ಸ್ವಾಮೀಜಿಗಳು ಭಜನೆ ಹಾಡುವುದನ್ನು ತನ್ಮಯತೆುಂದ ಆಲಿಸಿದರು.
ಪೇಜಾವರ ಶ್ರೀಗಳೊಂದಿಗೆ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥರು, ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥರು, ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು, ಪೇಜಾವರ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನತೀರ್ಥರು, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥರು, ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನತೀರ್ಥರು, ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥರು, ಭೀಮನಕಟ್ಟೆ ಮಠದ ಶ್ರೀರಘುವರೇಂದ್ರ ತೀರ್ಥರು, ಪಲಿಮಾರು ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರ ತೀರ್ಥರು ತಾಳಬದ್ಧರಾಗಿ ದಾಸರ ಪದಗಳನ್ನು ಹಾಡಿದರು.