ದೊಡ್ಡಣಗುಡ್ಡೆ: ಹಲ್ಲೆ, ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ ; ಅಪ್ರಾಪ್ತ ಬಾಲಕರಿಬ್ಬರ ಸಹಿತ ಮೂವರ ಬಂಧನ
ಉಡುಪಿ, ನ.15: ದೊಡ್ಡಣಗುಡ್ಡೆಯ ಜನತಾ ವ್ಯಾಯಾಮ ಶಾಲೆಯಲ್ಲಿ ನ.14ರಂದು ಸಂಜೆ 7ಗಂಟೆ ಸುಮಾರಿಗೆ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿ, ಧಾರ್ಮಿಕ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಿರುವ ಆರೋಪದಡಿ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕರು ಸೇರಿದಂತೆ ಮೂವರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ದೊಡ್ಡಣಗುಡ್ಡೆಯ ನಿವಾಸಿಗಳಾದ ಮೊಹಮ್ಮದ್ ಅಫ್ತಾಬ್ (19) ಹಾಗೂ ಕಾನೂನು ಸಂಘರ್ಷಕ್ಕೊಳಗಾದ ಇಬ್ಬರು 17 ವರ್ಷ ವಯಸ್ಸಿನ ಬಾಲಕರನ್ನು ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜನತಾ ವ್ಯಾಯಾಮ ಶಾಲೆಯಲ್ಲಿ ಪ್ರತಿ ಗುರುವಾರ ನಡೆಯುವ ಆಂಜನೇಯ ಪೂಜೆಗೆ ಬಂದ ಬಾಲಕನನ್ನು ಈ ಮೂವರು ಚೂರಿಯಿಂದ ತಿವಿಯಲು ಯತ್ನಿಸಿ ಹಲ್ಲೆ ನಡೆಸಿ, ಧಾರ್ಮಿಕ ಭಾವನೆಗೆ ದಕ್ಕೆ ತರುವ ರೀತಿ ಯಲ್ಲಿ ವರ್ತಿಸಿದ್ದರು ಮತ್ತು ದೇವರ ಪೋಟೋದ ಎದುರು ಭಾಗದ ನೆಲದಲ್ಲಿ ಇಟ್ಟಿದ್ದ ತೆಂಗಿನ ಕಾಯಿ ಒಡೆಯುವ ಕಲ್ಲನ್ನು ಹೊರಗೆ ಬಿಸಾಡಿದ್ದರು. ಅಲ್ಲದೆ ಇನ್ನೋರ್ವ ಬಾಲಕನಿಗೆ ಸಿಗರೇಟಿನಿಂದ ಸುಟ್ಟು ಬೆದರಿಕೆ ಒಡ್ಡಿದ್ದರು ಎಂದು ವ್ಯಾಯಾಮ ಶಾಲೆಯ ಅಧ್ಯಕ್ಷ ರಾಮದಾಸ್ ಶೆಟ್ಟಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ನಡೆದ ವಿಚಾರ ತಿಳಿದು ಸ್ಥಳದಲ್ಲಿ ನೂರಾರು ಮಂದಿ ಜಮಾ ಯಿಸಿದ್ದು, ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣ ವಾಗಿತ್ತು. ಈ ಹಿನ್ನೆಲೆ ಯಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಹಾಗೂ ಡಿವೈಎಸ್ಪಿ ಜೈಶಂಕರ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು.