ದೇರಳಕಟ್ಟೆ: ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಕಾಲೇಜು ವಾರ್ಷಿಕೋತ್ಸವ
ಕೊಣಾಜೆ: ವೈದ್ಯಕೀಯ ಕ್ಷೇತ್ರದಲ್ಲಿ ಸಾಕ್ಷಿ ಕೇಂದ್ರೀಕರಿಸಿಕೊಂಡು ಸಂಶೋಧನೆಗಳು ತತ್ವಗುಣ ಆಧಾರಿತವಾಗಿ ಬಲಿಷ್ಠ ಆಗಿರಬೇಕು. ಸರಕಾರಗಳು ಮಾತ್ರವಲ್ಲದೆ ವೈದ್ಯಕೀಯ ವೃತ್ತಿಯಲ್ಲಿ ಪಾರದರ್ಶಕತೆ ಹಾಗೂ ಗುಣಮಟ್ಟ ಕಾಪಾಡಿಕೊಳ್ಳುವುದು ಅತಿ ಮುಖ್ಯ. ಯಶಸ್ಸು ಎಂಬುದು ಶಾಶ್ವತವಲ್ಲ. ಸಾಧಕ ಸೋಲು ಹಾಗೂ ಗೆಲುವನ್ನು ಸಮಾನವಾಗಿ ಸ್ವೀಕರಿಸಿರುತ್ತಾನೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ಹೇಳಿದರು.
ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಡಿಟೋರಿಯಂನಲ್ಲಿ ಶನಿವಾರ ನಡೆದ ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಅಧೀನದ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ 20ನೇ ಕಾಲೇಜು ವಾರ್ಷಿಕೋತ್ಸವ, ಪ್ರತಿಭಾನ್ವಿತರಿಗೆ ಪ್ರಶಸ್ತಿ ವಿತರಣೆ ಹಾಗೂ 2019-20ನೇ ಸ್ಟೂಡೆಂಟ್ಸ್ ಕೌನ್ಸಿಲ್ ಉದ್ಘಾಟಿಸಿ ಅವರು ಮಾತನಾಡಿದರು.
ನಿಟ್ಟೆ ವಿಶ್ವವಿದ್ಯಾಲಯ ತನ್ನದೇ ಆದ ದೂರದೃಷ್ಟಿ, ಧ್ಯೇಯಗಳು ಹಾಗೂ ಮೌಲ್ಯಗಳ ಮೂಲಕ ಛಾಪನ್ನು ಮೂಡಿಸಿದೆ ಎಂದು ಹೇಳಿದರು.
ದೇರಳಕಟ್ಟೆಯ ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಪ್ರೊ. ಡಾ. ಎಂ. ಶಾಂತಾರಾಮ ಶೆಟ್ಟಿ ಹಾಗೂ ಕುಲಪತಿ ಪ್ರೊ. ಡಾ.ಕೆ. ಸತೀಶ್ ಕುಮಾರ್ ಭಂಡಾರಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್ ಪ್ರಶಸ್ತಿ ವಿಜೇತೆ ಶರ್ಮಿಳಾ ಎಸ್. ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸ್ಮರಣ ಸಂಚಿಕೆ "ಕಲೀಡೊ" ಬಿಡುಗಡೆಗೊಳಿಸಲಾಯಿತು.
2019-20ರ ಸಾಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಪ್ರತಿಜ್ಞಾವಿಧಿಗೈದರು.
ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಡೀನ್ ಡಾ.ಪಿ.ಎಸ್. ಪ್ರಕಾಶ್ ಸ್ವಾಗತಿಸಿದರು. ಕ್ಷೇಮ ವೈಸ್ ಡೀನ್ ಡಾ. ಎ.ಎಂ. ಮಿರಾಜ್ಕರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕ್ರೀಡಾ ಸಲಹೆಗಾರ ಡಾ. ಮುರಲೀಕೃಷ್ಣ ಕ್ರೀಡಾ ವಿಜೇತರ ಹೆಸರು ವಾಚಿಸಿದರು. ವೈಸ್ ಡೀನ್ ಡಾ. ಜಯಪ್ರಕಾಶ್ ಶೆಟ್ಟಿ ಶೈಕ್ಷಣಿಕವಾಗಿ ಪ್ರಶಸ್ತಿ ವಿಜೇತ ಪ್ರತಿಭಾನ್ವಿತರ ಹೆಸರು ವಾಚಿಸಿದರು.
ಡಾ. ಸಿದ್ದಾರ್ಥ್ ಶೆಟ್ಟಿ ಸ್ಟೂಡೆಂಟ್ಸ್ ಕೌನ್ಸಿಲ್ ನ ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು. ಕುಲಸಚಿವೆ ಡಾ. ರೂಪಾ ಭಂಡಾರಿ ಪ್ರತಿಜ್ಞಾ ವಿಧಿ ಬೋಧಿಸಿದರು.