ಉಚ್ಚಿಲ ಬೋವಿ ವಿದ್ಯಾ ಸಂಸ್ಥೆಯ ಶತಮಾನೋತ್ಸವ ಸಂಭ್ರಮ
ಉಳ್ಳಾಲ, ನ.17: ಮೀನುಗಾರಿಕೆ ಪ್ರಮುಖ ವೃತ್ತಿಯಾಗಿಸಿಕೊಂಡಿರುವ ಬೋವಿ ಸಮಾಜ ಶೈಕ್ಷಣಿಕವಾಗಿ ಮುಂದುವರಿಯಬೇಕು ಎಂಬ ಪ್ರಮುಖ ಗುರಿ ಇಟ್ಟುಕೊಂಡು ಉಚ್ಚಿಲ ಬೋವಿ ಶಿಕ್ಷಣ ಸಂಸ್ಥೆಯ ಮೂಲಕ ಅದನ್ನು ಸಾಧಿಸಿ ತೋರಿಸಿದ ಸಮಾಜದ ಎಲ್ಲ ಹಿರಿಯರು ಶ್ಲಾಘನೆಗೆ ಅರ್ಹರು ಎಂದು ಬೋವಿ ಸಮುದಾಯ ಸಭಾದ ಗೌರವಾಧ್ಯಕ್ಷ ಮಾಧವ ಕೊಕ್ಕೋಟ್ಟು ಅಭಿಪ್ರಾಯಪಟ್ಟರು.
ಸೋಮೇಶ್ವರ ಉಚ್ಚಿಲ ಬೋವಿ ವಿದ್ಯಾಸಂಸ್ಥೆಗಳು ಹಾಗೂ ಶತಮಾನೋತ್ಸವ ಆಚರಣೆ ಸಮಿತಿ ವತಿಯಿಂದ ಮೂರು ದಿನಗಳ ಕಾಲ ನಡೆಯಲಿರುವ ಶತಮಾನೋತ್ಸವ ಸಂಭ್ರಮವನ್ನು ಶುಕ್ರವಾರ ಉಚ್ಚಿಲ ಅನುದಾನಿತ ಬೋವಿ ಶಾಲೆಯಲ್ಲಿ ಧ್ವಜಾರೋಹಣಗೈಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಮುಂಬೈಯ ಯಂಗ್ ಮೆನ್ಸ್ ಬೋವಿ ಅಸೋಸಿಯೇಶನ್ ಅಧ್ಯಕ್ಷ ಚಂದ್ರಕಾಂತ್ ಎಸ್. ಉಚ್ಚಿಲ್ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ಸೋಮೇಶ್ವರ ಉಚ್ಚಿಲ ಮೂರೂರು ಬೋವಿ (ಮೋಯ) ಮಹಾಸಭಾ ಅಧ್ಯಕ್ಷ ಚಿದಾನಂದ್ ಆರ್. ಉಚ್ಚಿಲ್, ಉಚ್ಚಿಲ ಬೋವಿ ವಿದ್ಯಾಸಂಸ್ಥೆಗಳ ಸಂಚಾಲಕ ದೇವದಾಸ್ ಟಿ.ಉಚ್ಚಿಲ್, ಸೋಮೇಶ್ವರ ಉಚ್ಚಿಲ ಮೂರೂರು ಬೋವಿ (ಮೋಯ) ಮಹಿಳಾ ಸಭಾ ಅಧ್ಯಕ್ಷೆ ಶಾರದಾ ಪುರುಷೋತ್ತಮ್, ಶತಮಾನೋತ್ಸವ ಆಚರಣೆ ಸಮಿತಿ ಗೌರವಾಧ್ಯಕ್ಷೆ ಶಾರದಾ ಪುರುಷೋತ್ತಮ್, ಗೌರವಾಧ್ಯಕ್ಷೆ ಲಕ್ಷ್ಮೀ ದಿನಕರ್ ಉಚ್ಚಿಲ್, ಪ್ರಧಾನ ಕಾರ್ಯದರ್ಶಿ ನಾರಾಯಣ ಸಿ. ಉಚ್ಚಿಲ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಕೆೇಶ್ ಜಿ. ಉಚ್ಚಿಲ್, ಸೋಮೇಶ್ವರ ಪುರಸಭೆಯ ಸದಸ್ಯ ಸಚಿನ್ ಉಚ್ಚಿಲ್ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಡ್ಕ ಶ್ರೀ ಭಗವತೀ ದೈವಸ್ಥಾನದ 13 ಮಂದಿ ಆಚಾರಪಟ್ಟವರನ್ನು ಗೌರವಿಸಲಾಯಿತು. ನವೀನ ಬೆಳ್ಚಪ್ಪಾಡ ಅನಿಸಿಕೆ ವ್ಯಕ್ತಪಡಿಸಿದರು.
ಶತಮಾನೋತ್ಸವ ಆಚರಣೆ ಸಮಿತಿ ಅಧ್ಯಕ್ಷ ಎನ್.ಜಿ. ಮೋಹನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಾಧ್ಯಕ್ಷ ರೋಹಿತಾಶ್ವ ಸ್ವಾಗತಿಸಿದರು. ಅಡ್ಕ ಭಗವತೀ ದೈವಸ್ಥಾನದ ಆಚಾರಪಟ್ಟವರು ದೀಪ ಬೆಳಗಿಸಿ ಪ್ರಾರ್ಥಿಸಿದರು. ಉಚ್ಚಿಲ ಅನುದಾನಿತ ಬೋವಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಮೇಘನಾ ವಂದಿಸಿದರು.
ಬಳಿಕ ವಿದ್ದು ಉಚ್ಚಿಲ್ ನಿರ್ದೇಶನದ, ಶ್ಯಾಮಲಾ ಮಾಧವ ವಿರಚಿತ 'ಶತ ದೀವಿಗೆ ಉಚ್ಚಿಲ ಶಾಲೆ ನಡೆದು ಬಂದ ದಾರಿ' ಧ್ವನಿ ಬೆಳಕಿನ ಕಾರ್ಯಕ್ರಮ ಪ್ರದರ್ಶಿಸಲ್ಪಟ್ಟಿತು. ಕೊನೆಯಲ್ಲಿ ನಿರ್ದೇಶಕರನ್ನೂ, ಕಲಾವಿದರನ್ನೂ, ಲೇಖಕಿ ಶ್ಯಾಮಲಾ ಮಾಧವರನ್ನು ಅಭಿನಂದಿಸಲಾಯಿತು.