ಇನೋಳಿ ‘ಬಿ’ ಸೈಟ್ನಲ್ಲಿ ಧಾರ್ಮಿಕ ಕಾರ್ಯಕ್ರಮ
ಮಂಗಳೂರು, ನ.17: ಯೌವನ ಎನ್ನುವುದು ದುರ್ಬಳಕೆ ಆಗುತ್ತಿದ್ದು ಯುವಸಮುದಾಯ ಅತ್ಯಂತ ವೇಗವಾಗಿ ದಾರಿ ತಪ್ಪುತ್ತಿರುವುದರಿಂದ ಸಮಾಜ, ಊರು, ಸಮುದಾಯದ ಅಭಿವೃದ್ಧಿಯೂ ಕುಂಠಿತವಾಗುತ್ತಿದೆ ಎಂದು ವಳಚ್ಚಿಲ್ ಕೇಂದ್ರ ಜುಮಾ ಮಸೀದಿಯ ಇಮಾಮ್ ಕೆ.ಐ.ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಅಭಿಪ್ರಾಯಪಟ್ಟರು.
ಈದ್-ಮಿಲಾದ್ ಪ್ರಯುಕ್ತ ಇನೋಳಿ ಬಿ ಸೈಟ್ ಹಿದಾಯತುಲ್ ಇಸ್ಲಾಂ ಮದ್ರಸದ ವತಿಯಿಂದ ಶನಿವಾರ ನಡೆದ ಧಾರ್ಮಿಕ ಸಭೆಯಲ್ಲಿ ‘ದಾರಿ ತಪ್ಪುತ್ತಿರುವ ಯುವ ಸಮುದಾಯ’ ಎಂಬ ವಿಷಯದಲ್ಲಿ ಅವರು ಉಪನ್ಯಾಸ ನೀಡಿದರು.
ದಾರಿ ತಪ್ಪಿದ ಯುವ ಸಮುದಾಯ ಸಮಾಜಕ್ಕೆ ನಷ್ಟ ಆಗುತ್ತಿರುವುದರಿಂದ ಇದಕ್ಕೆ ಪರಿಹಾರ ನೀಡಲು ಯಾವುದೇ ವಿಜ್ಞಾನಿಗಳಿಂದ ಸಾಧ್ಯವಿಲ್ಲ. ಇಂದು ಮನುಷ್ಯ ಸತ್ಯ ಹೇಳುವುದನ್ನೇ ಮರೆತಿದ್ದಾನೆ. ಸುಳ್ಳನ್ನು ಸತ್ಯವನ್ನಾಗಿಸುವ ಏಕೈಕ ಉದ್ದೇಶದಿಂದಲೇ ದೇವನ ಮೇಲೆ ಆಣೆ-ಪ್ರಮಾಣ ಮಾಡಲಾಗುತ್ತಿದೆ ಎಂದು ಕುಕ್ಕಿಲ ದಾರಿಮಿ ಖೇದ ವ್ಯಕ್ತಪಡಿಸಿದರು.
ಇನೋಳಿ ಎ ಸೈಟ್ ಹಿದಾಯತುಲ್ ಇಸ್ಲಾಂ ಮದ್ರಸದ ಸದರ್ ಮುಅಲ್ಲಿಂ ಅಬ್ದುಲ್ ಹಮೀದ್ ಅಝ್ಹರಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಇನೋಳಿ ಜಾಮಿಯಾ ಮುಬಾರಕ್ ಮಸೀದಿಯ ಖತೀಬ್ ಯು.ಕೆ.ಅಬೂಬಕರ್ ಮದನಿ, ಮುಅಲ್ಲಿಂ ಅಬ್ದುಲ್ ಜಬ್ಬಾರ್ ದಾರಿಮಿ, ಅಧ್ಯಕ್ಷ ಅಬ್ದುಲ್ ಖಾದರ್ ಕೆಳಗಿನಕೆರೆ, ಪ್ರಧಾನ ಕಾರ್ಯಕದರ್ಶಿ ಟಿ.ಎಚ್. ಅಬ್ಬಾಸ್, ಜತೆ ಕಾರ್ಯದರ್ಶಿ ಅಕ್ರಮ್ ಇನೋಳಿ, ಇನೋಳಿ ಬಿ ಸೈಟ್ ಹಿದಾಯತುಲ್ ಇಸ್ಲಾಂ ಮದ್ರಸದ ಮುಅಲ್ಲಿಂ ಅಶ್ರಫ್ ಮುಸ್ಲಿಯಾರ್, ಅಧ್ಯಕ್ಷ ಟಿ.ಎಚ್.ನಝೀರ್, ಉಪಾಧ್ಯಕ್ಷ ಅಬ್ದುಲ್ ಹಮೀದ್, ಉಂಞಿ ದಿಡಿಂಜ ಇನೋಳಿ ಮತ್ತಿತರರು ಉಪಸ್ಥಿತರಿದ್ದರು.
ಮಸ್ಜಿದುರಹ್ಮಾನ್ ಪ್ರಧಾನ ಕಾರ್ಯದರ್ಶಿ ಹುಸೈನ್ ಬಾವು ಸ್ವಾಗತಿಸಿದರು. ಇನೋಳಿ ಮಸೀದಿಯ ಮುಅದ್ದಿನ್ ಅಹ್ಮದ್ ಕುಂಞಿ ಮುಸ್ಲಿಯಾರ್ ಕಿರಾಅತ್ ಪಠಿಸಿದರು.