ನ.24: ತೀರ್ಥ ವಿಟ್ಠಲ್ ಸಂಗೀತೋತ್ಸವ
ಉಡುಪಿ, ನ.17: ಸಂಗೀತ ಸಭಾ ಉಡುಪಿ ಹಾಗೂ ಆಭರಣ ಜುವೆಲ್ಲರ್ಸ್ ಇವರ ಜಂಟಿ ಸಹಯೋಗದಲ್ಲಿ ನ.24ರ ಸಂಜೆವ 5:00ರಿಂದ ಮಣಿಪಾಲದ ಸಿಂಡಿಕೇಟ್ ಬ್ಯಾಂಕ್ ಗೋಲ್ಡನ್ ಜ್ಯುಬಿಲಿ ಹಾಲ್ನಲ್ಲಿ ‘ತೀರ್ಥ ವಿಟ್ಠಲ’ ಭಕ್ತಿ ಸಂಗೀತೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಸಂಗೀತ ಸಭಾದ ಅಧ್ಯಕ್ಷ ಟಿ.ರಂಗ ಪೈ ತಿಳಿಸಿದ್ದಾರೆ.
ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶಾಸ್ತ್ರೀಯ ಸಂಗೀತವನ್ನು ಜನಪ್ರಿಯಗೊಳಿಸುವ ಗುರಿಯೊಂದಿಗೆ 1962ರಲ್ಲಿ ವಿಜಯನಾಥ ಶೈಣೈ ಅವರಿಂದ ಪ್ರಾರಂಭಗೊಂಡ ಸಂಗೀತ ಸಭಾ,ಹತ್ತು ಹಲವು ದೇಶದ ವಿಶ್ವವಿಖ್ಯಾತ ಕಲಾವಿದರನ್ನು ಉಡುಪಿಯ ಜನತೆಗೆ ಪರಿಚಯಿಸಿದ್ದು ಜನಮನ್ನಣೆ ಗಳಿಸಿದೆ ಎಂದರು.
ಕಳೆದ ಮೂರು ವರ್ಷಗಳಿಂದ ಆಯೋಜಿಸುತ್ತಿರುವ ‘ತೀಥ ವಿಟ್ಠಲ್’ ಭಕ್ತಿ ಸಂಗೀತ ಕಾರ್ಯಕ್ರಮದಲ್ಲಿ ಈ ಬಾರಿ ಮುಂಬಯಿಯ ಕಲಾವಿದರಾದ ಪ್ರಥಮೇಶ್ ಲಗಾಟೆ ಹಾಗೂ ಮುಗ್ಧ ವೈಶಂಪಾಯ ಅವರು ಸಹ ಕಲಾವಿದರೊಂದಿಗೆ ಭಜನ ಸಂಧ್ಯಾ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಲಿದ್ದಾರೆ ಎಂದರು.
ಈ ಕಾರ್ಯಕ್ರಮಕ್ಕೆ ಸಂಗೀತಾಸಕ್ತರಿಗೆ ಪಾಸ್ ಮೂಲಕ ಉಚಿತ ಪ್ರವೇಶವಿರುತ್ತದೆ. ಪಾಸ್ಗಳು ಸೋಮವಾರದಿಂದ ಕೆಎಂ ಮಾರ್ಗದಲ್ಲಿರುವ ಹರ್ಷ ಮಳಿಗೆಯಲ್ಲಿ ಲಭ್ಯವಿರುತ್ತದೆ ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಗೀತ ಸಭಾದ ಟ್ರಸ್ಟಿಗಳಾದ ಸಂಧ್ಯಾ ಕಾಮತ್, ಶಶಿಕಲಾ ಭಟ್, ಅನಂತನಾರಾಯಣ ಪೈ ಹಾಗೂ ಟಿ.ಅಜಿತ್ ಪೈ ಉಪಸ್ಥಿತರಿದ್ದರು.