ಗಿಡನೆಟ್ಟು ಒತ್ತುವರಿ : ಪಂಚಾಯತ್ ಯಿಂದ ಕಾರ್ಯಾಚರಣೆ
ಪಡುಬಿದ್ರಿ : ಇಲ್ಲಿನ ಸಂತೆ ಮಾರುಕಟ್ಟೆಯಲ್ಲಿ ಪಡುಬಿದ್ರಿ ಗ್ರಾಮ ಪಂ. ಜಮೀನಿನಲ್ಲಿ ಖಾಸಗಿ ವ್ಯಕ್ತಿಯೋರ್ವರು ಅನಧಿಕೃತವಾಗಿ ಗಿಡ ನೆಟ್ಟು ಕಟ್ಟೆ ಕಟ್ಟಿ ಒತ್ತುವರಿ ಮಾಡಿರುವ ಸ್ಥಳವನ್ನು ಪಂಚಾಯತ್ ಪೊಲೀಸ್ ಬಂದೋಬಸ್ತ್ ನಲ್ಲಿ ಬುಧವಾರ ತೆರವು ಮಾಡಲಾಯಿತು.
ಪಿಡಿಒ ಪಂಚಾಕ್ಷರಿ ಹಿರೇಮಠ್ ನೇತೃತ್ವದಲ್ಲಿ ಗ್ರಾಮ ಪಂ. ಅಧ್ಯಕ್ಷೆ ದಮಯಂತಿ ಅಮೀನ್ ಹಾಗೂ ಸದಸ್ಯರ ಉಪಸ್ಥಿತಿಯಲ್ಲಿ ನಡೆದ ಕಾರ್ಯಾಚರಣೆ ನಡೆಯಿತು.
ಪಡುಬಿದ್ರಿ ನಡ್ಸಾಲು ಗ್ರಾಮದ ಸ.ನಂ 47/12 ರಲ್ಲಿ 66 ಸೆಂಟ್ಸ್ ಜಮೀನನ್ನು ಸರ್ಕಾರ ಗ್ರಾಮ ಪಂಚಾಯತ್ ಗೆ ಹಸ್ತಾಂತರಿಸಿತ್ತು. ಇಲ್ಲಿನ ನಿವಾಸಿ ಜಗದೀಶ ಮಲ್ಯ ಎಂಬವರಿಗೆ ಸೇರಿದ ವಾಣಿಜ್ಯ ಮಳಿಗೆಗಳ ಮುಂಭಾಗದಲ್ಲಿ ಸರ್ಕಾರಿ ಜಮೀನು ಒತ್ತುವರಿ ಮಾಡಿ ಗಿಡಗಳನ್ನು ನೆಟ್ಟು ಕಟ್ಟೆ ಕಟ್ಟಲಾಗಿತ್ತು. ಅದನ್ನು ತೆರವು ಮಾಡುವಂತೆ ತಿಳಿಸಲಾಗಿತ್ತು.
ಈ ತಿಂಗಳ 7ರಂದು ನಡೆದ ಪಂ. ಸಾಮಾನ್ಯ ಸಭೆ ನಡಾವಳಿಯಂತೆ ಪೊಲೀಸ್ ರಕ್ಷಣೆ ಪಡೆದು ಜೆಸಿಬಿ ಸಹಾಯದಿಂದ ಗಿಡಕ್ಕೆ ಕಟ್ಟಿದ ಕಟ್ಟೆಗಳನ್ನು ತೆರವು ಮಾಡಲಾಯಿತು. ಈ ಕಟ್ಟಡದ ಮುಂಭಾಗದಲ್ಲಿ ಶೀಟುಗಳನ್ನು ಹಾಕಿ ಇನ್ನಷ್ಟು ಒತ್ತುವರಿ ಮಾಡಲಾಗಿದ್ದು, ಅದನ್ನು ವಾರದೊಳಗೆ ತೆರವು ಮಾಡುವಂತೆ ಪಿಡಿಒ ಸೂಚನೆ ನೀಡಿದರು. ಒಂದು ವೇಳೆ ತೆರವು ಮಾಡದಿದ್ದಲ್ಲಿ ಪಂ. ತೆರವು ಮಾಡಿ ಮಾಲಕರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು.