ದಲಿತರು, ಮುಸ್ಲಿಮರನ್ನು ದಮನಿಸುವ ಹುನ್ನಾರ ನಡೆಯುತ್ತಿದೆ: ಶ್ಯಾಮರಾಜ್ ಬಿರ್ತಿ
ಹೆಬ್ರಿ, ನ.24: ದೇಶದಲ್ಲಿ ಸದ್ಯ ಅಘೋಷಿತ ತುರ್ತು ಪರಿಸ್ಥಿತಿ ಇದೆ. ದೇಶದ ಆರ್ಥಿಕ ಸ್ಥಿತಿ ನೆಲಕಚ್ಚಿ ಹೋಗಿದ್ದರೂ ದೇಶ ಪ್ರಕಾಶಿಸುತ್ತಿದೆ ಎನ್ನಲಾಗುತ್ತಿದೆ. ಸತ್ಯ ಹೇಳಿದರೆ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತದೆ ಎಂದು ದಲಿತ ಮುಖಂಡ ಶ್ಯಾಮರಾಜ್ ಬಿರ್ತಿ ಹೇಳಿದ್ದಾರೆ.
ಹೆಬ್ರಿಯಲ್ಲಿಂದು ನಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ಯ ಹೆಬ್ರಿ ತಾಲೂಕು ಶಾಖೆ ರಚನೆ ಮತ್ತು ಪದಾಧಿಕಾರಿಗಳ ಆಯ್ಕೆ ಹಾಗೂ ದಲಿತ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಈ ದೇಶದಲ್ಲಿ ಕೋಮುವಾದಿಗಳು, ಮನುವಾದಿ ಆಡಳಿತವನ್ನು ನೆಲೆಗೊಳಿಸಲು ಅಡ್ಡಗಾಲಾಗಿರುವ ದಲಿತರು ಮತ್ತು ಮುಸ್ಲಿಮರನ್ನು ದಮನಿಸುವ ಹುನ್ನಾರ ನಡೆಸುತ್ತಿದ್ದಾರೆ. ದೇಶದ ಸಂವಿಧಾನವನ್ನು ಗೌಣವಾಗಿಸುವ ತಂತ್ರ ನಡೆಯುತ್ತಿದೆ. ಶಾಸಕಾಂಗವೇ ನ್ಯಾಯಾಂಗವನ್ನು ನಿಯಂತ್ರಿಸುತ್ತಿದೆಯೋ ಎನ್ನುವ ಅನುಮಾನ ಮೂಡತ್ತದೆ ಎಂದವರು ಅಭಿಪ್ರಾಯಿಸಿದರು.
ಸಮಾವೇಶವನ್ನು ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್ ಉದ್ಘಾಟಿಸಿದರು. ಹೆಬ್ರಿ ತಾಲೂಕು ಪ್ರಧಾನ ಸಂಚಾಲಕರಾಗಿ ದೇವು ಕನ್ಯಾನ ಅವರನ್ನು ಸರ್ವಾನುಮತದಿಂದ ಆರಿಸಲಾಯಿತು. ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಲಾಯಿತು.
ಸಮಾವೇಶದಲ್ಲಿ ಪರಮೇಶ್ವರ್ ಉಪ್ಪೂರು, ಲೋಕೇಶ ಕಂಚಿನಡ್ಕ, ಭಾಸ್ಕರ್ ಮಾಸ್ತರ್, ರಾಘವೇಂದ್ರ, ಅಣ್ಣಪ್ಪ ನಕ್ರೆ, ಅಪ್ಪು ಹೆಬ್ರಿ, ಅಣ್ಣಪ್ಪ ಮುದ್ರಾಡಿ, ಶಂಕರ್ ದಾಸ್ ಚೆಂಡ್ಕಳ, ಜಯರಾಮ ಮುದ್ರಾಡಿ ಮತ್ತಿತರರು ಉಪಸ್ಥಿತರಿದ್ದರು.