ಉದ್ಯಾವರ ಮಾಧವ ಆಚಾರ್ಯಗೆ ಅಲೆವೂರು ಗ್ರೂಪ್ ಅವಾರ್ಡ್
ಉಡುಪಿ, ಡಿ.2: ಅಲೆವೂರು ಗ್ರೂಪ್ ಫೋರ್ ಎಜ್ಯುಕೇಷನ್ ವತಿಯಿಂದ ನೀಡಲಾಗುವ 2019ನೇ ಸಾಲಿನ ಪ್ರತಿಷ್ಟಿತ ಅಲೆವೂರು ಗ್ರೂಪ್ ಅವಾರ್ಡ್ಗೆ ಹೆಸರಾಂತ ಸಾಹಿತಿ, ಸೃಜನಶೀಲ ಕಲಾವಿದ, ರಂಗ ನಿರ್ದೇಶಕ, ಚಿಂತಕ, ವಾಗ್ಮಿ ಪ್ರೊ. ಉದ್ಯಾವರ ಮಾಧವ ಆಚಾರ್ಯ ಆಯ್ಕೆಯಾಗಿದ್ದಾರೆ.
ಕನ್ನಡ ಸಾರಸ್ವತ ಲೋಕಕ್ಕೆ ಸಣ್ಣ ಕಥೆಗಳು, ಕವನ ಸಂಕಲನ, ಪ್ರಬಂಧ ಸಂಕಲನ, ನಾಟಕಗಳ ಜೊತೆಗೆ ‘ರಂಗ ರೂಪಕ ಸಾಹಿತ್ಯ ಕೃತಿ’ಗಳನ್ನು ಕೊಡುಗೆ ಯಾಗಿ ನೀಡಿರುವ ಪ್ರೊ.ಮಾಧವ ಆಚಾರ್ಯ, ಸಮೂಹ ಕಲಾವಿದರು ಉಡುಪಿ ಲಾಂಛನದಡಿ ಹಲವಾರು ರೂಪಕಗಳನ್ನು ಪರಿಕಲ್ಪಿಸಿ, ನಿರ್ದೇಶಿಸಿ ದ್ದಾರೆ. ಈ ಮೂಲಕ ರಾಷ್ಟ್ರೀಯ ಮನ್ನಣೆಯನ್ನೂ ಪಡೆದಿದ್ದಾರೆ.
ಡಿ.7ರಂದು ಅಪರಾಹ್ನ 2:30ಕ್ಕೆ ಅಲೆವೂರಿನ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ 15ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಪ್ರೊ.ಆಚಾರ್ಯರಿಗೆ ಬೆಳ್ಳಿ ಫಲಕ ಸಹಿತ ಅಲೆವೂರು ಗ್ರೂಪ್ ಪ್ರಶಸ್ತಿ ಪ್ರದಾನ ಮಾಡಲಿರುವರು. ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರಾಶುಪಾಲ ವಿನ್ಸೆಂಟ್ ಆಳ್ವ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿರುವರು.
ಅಲೆವೂರು ಗ್ರೂಪ್ ಫೋರ್ ಎಜುಕೇಶನ್ ಅಧ್ಯಕ್ಷ ಎ. ಗಣಪತಿ ಕಿಣಿ ಅಧ್ಯಕ್ಷತೆ ವಹಿಸಲಿರುವರು ಎಂದು ಸಂಸ್ಥೆಯ ಕಾರ್ಯದರ್ಶಿ ಅಲೆವೂರು ದಿನೇಶ್ ಕಿಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.