ಹರೇಕಳ : ಹಾಜಬ್ಬ ಶಾಲೆಗೆ ಕೋಟ ಶ್ರೀನಿವಾಸ ಪೂಜಾರಿ ಭೇಟಿ
ಕೊಣಾಜೆ: ಹರೇಕಳ ನ್ಯೂಪಡ್ಪುವಿನವ ಸರ್ಕಾರಿ ಪ್ರೌಢಶಾಲೆಗೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಶುಕ್ರವಾರ ಭೇಟಿ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಸರ್ಕಾರಿ ಶಾಲೆಗೆ ಶಿಕ್ಷಕರು ಮೆರಿಟ್ ಆಧಾರದಲ್ಲಿ ಆಯ್ಕೆಯಾಗುತ್ತಾರೆ ಜೊತೆಗೆ ಸರ್ಕಾರ ಕೂಡ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಿದೆ. ಆದ್ದರಿಂದ ಸರ್ಕಾರಿ ಶಾಲೆಯ ಬಗ್ಗೆ ನಿರ್ಲಕ್ಷ ಮಾಡದೆ ನಾವೆಲ್ಲರೂ ಸೇರಿ ಹೆಚ್ಚಿನ ಸಹಕಾರ ಪ್ರೋತ್ಸಾಹ ನೀಡಬೇಕಿದೆ ಎಂದರು.
ಹರೇಕಳದ ಹಾಜಬ್ಬರು ಈ ಭಾಗದಲ್ಲಿ ಶಿಕ್ಷಣಕ್ಕಾಗಿ ಕ್ರಾಂತಿ ಮಾಡುವುದರೊಂದಿಗೆ ಶಾಲೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ನ್ಯೂಪಡ್ಪು ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ರೂಪಿಸಿದ್ದಾರೆ. ಅವರ ಬೇಡಿಕೆಯಂತೆ ಶಾಲೆಯ ಕ್ರೀಡಾ ಮೈದಾನ ಸೇರಿದಂತೆ ಅಭಿವೃದ್ದಿ ಚಟುವಟಿಕೆಗಳಿಗಳಿಗೆ 10 ಲಕ್ಷ ರೂ ಮಂಜೂರುಗೊಳಿಸಲಾಗಿದ್ದು, ಪ್ರಥಮ ಹಂತದಲ್ಲಿ 5 ಲಕ್ಷ ರೂ ಅನುದಾನದೊಂದಿಗೆ ಕಾಮಗಾರಿ ಆರಂಭಗೊಳ್ಳಲಿದೆ. ಅಲ್ಲದೆ ಇಲ್ಲಿ ಶಾಲಾ ಮಕ್ಕಳಿಗೆ ನಾಗರಿಕರಿಗೆ ಅನುಕೂಲವಾಗುವಂತೆ ಸರ್ಕಾರಿ ಬಸ್ ಓಡಾಟದ ವ್ಯವಸ್ಥೆಯನ್ನು ಮಾಡಲಾಗುವುದು , ಈ ಬಗ್ಗೆ ಶೀಘ್ರವೇ ಆರ್ ಟಿ ಒ ಅವರಲ್ಲಿ ವ್ಯವಸ್ಥೆಯ ಬಗ್ಗೆ ಮಾತನಾಡುತ್ತೇನೆ ಎಂದ ಅವರು ಶಾಲೆಗೆ ಬರುವ ರಸ್ತೆಯ ಅಭಿವೃದ್ಧಿಯನ್ನು ಮುಂಬರುವ ಮಳೆಗಾಲದ ಮುಂಚೆ ಮಾಡಿಕೊಡುವ ಭರವಸೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಮಾಜಿ ಜಿಲ್ಲಾ ಪಂ. ಸದಸ್ಯ ಸಂತೋಷ್ ಕುಮಾರ್ ಬೋಳಿಯಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಹರೇಕಳ ಗ್ರಾಮ ಪಂ. ಅಧ್ಯಕ್ಷ ಅನಿತ ಡಿಸೋಜ, ರವೀಂದ್ರ ಶೆಟ್ಟಿ ಉಳಿದೊಟ್ಟು, ಮುತ್ತು ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ರೂಪಾ ಎಂ.ಪಿ.ಸ್ವಾಗತಿಸಿ, ಶಿಕ್ಷಕಿ ಸುರೇಖ ಹರೀಶ್ ಪೂಜಾರಿ ವಂದಿಸಿದರು.
ಹಳ್ಳಿಯ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ. ಸಚಿವ ಶ್ರೀನಿವಾಸ ಪೂಜಾರಿ ಅವರು ಶಾಲೆಗೆ ಭೇಟಿ ನೀಡಿ ಅಭಿವೃದ್ಧಿ ಗೆ ಹಣ ಮಂಜೂರುಗೊಳಿಸಿದ್ದಾರೆ. ಅವರಿಗೆ ಶಾಲೆಯ ವತಿಯಿಂದ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
- ಹರೇಕಳ ಹಾಜಬ್ಬ