ಕೊಣಾಜೆ: ಶಾಲಾ ತಡೆಗೋಡೆ ಉದ್ಘಾಟನೆ, ವಾರ್ಷಿಕೋತ್ಸವ
ಕೊಣಾಜೆ, ಡಿ.13: ಕೊಣಾಜೆ ಪದವಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಎಂಆರ್ಪಿಎಲ್ನ ನಲ್ವತ್ತು ಲಕ್ಷ ರೂ. ನೆರವಿನೊಂದಿಗೆ ನಿರ್ಮಾಣಗೊಂಡ ತಡೆಗೋಡೆ ಉದ್ಘಾಟನೆ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವು ಬುಧವಾರ ನಡೆಯಿತು.
ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು ತಡೆಗೋಡೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಇಂದು ಶಿಕ್ಷಣಕ್ಕಾಗಿ ಸರಕಾರವು ಹಲವಾರು ಸೌಲಭ್ಯಗಳನ್ನು ಸರ್ಕಾರಿ ಶಾಲೆಗೆ ಒದಗಿಸುತ್ತಿದ್ದು, ಇದರೊಂದಿಗೆ ಸಂಘ, ಸಂಸ್ಥೆಗಳ ಸಹಕಾರವೂ ಶಾಲೆಯ ಅಭಿವೃದ್ಧಿಗಳಿಗೆ ದೊರೆತರೆ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸರ್ವತೋಮುಖ ಬೆಳವಣಿಗೆಗೆ ಸಹಕಾರವಾಗುತ್ತದೆ ಎಂದರು.
ಶಾಲಾ ವಾರ್ಷಿಕೋತ್ಸವದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಎಂಆರ್ಪಿಎಲ್ನ ಮಾರ್ಕೆಟಿಂಗ್ ಅಸಿಸ್ಟೆಂಟ್ ಮ್ಯಾನೇಜರ್ ದಯಾನಂದ ಪ್ರಭು, ಎಂಆರ್ಪಿಎಲ್ ಈಗಾಗಲೇ ಸಮಾಜಸೇವಾ, ಸಾರ್ವಜನಿಕ ಹಿತದೃಷ್ಟಿಯಿಂದ ಈಗಾಗಲೇ ಹಲವಾರು ಯೋಜನೆಗಳನ್ನು ರೂಪಿಸಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ನಝರ್ ಷಾ ಪಟ್ಟೋರಿ ವಹಿಸಿದ್ದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಎಂಆರ್ಪಿಎಲ್ನ ಅಸಿಸ್ಟೆಂಟ್ ಮ್ಯಾನೇಜರ್ ಸಂಪತ್ ಕುಮಾರ್, ಮುಖಂಡರಾದ ಹಾಜಿ ಇಬ್ರಾಹೀಂ ಕೋಡಿಜಾಲ್, ಪಂಚಾಯತ್ ಸದಸ್ಯ ಅಚ್ಯುತ ಗಟ್ಟಿ, ರವೀಂದ್ರ ರೈ ಹರೇಕಳ, ಅಬ್ದುಲ್ ರಹಿಮಾನ್ ಕೋಡಿಜಾಲ್, ಹಸೈನಾರ್, ಜಯಪ್ರಕಾಶ್, ಅಬ್ದುಲ್ ರಹಿಮಾನ್, ಸುದರ್ಶನ ಭಟ್, ಶಾಲಾ ಮುಖ್ಯ ಶಿಕ್ಷಕಿ ಮೀನಾ ಗಾವ್ಕರ್ ಮೊದಲಾದವರು ಉಪಸ್ಥಿತರಿದ್ದರು.