ಉಳ್ಳಾಲ: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ
ಉಳ್ಳಾಲ: ಐಕ್ಯತೆ ಸಾರ್ವಬೌಮತೆಯನ್ನು ಎತ್ತಿ ಹಿಡಿದ ಭಾರತದ ಸಂವಿಧಾನದ ಅಡಿಯಲ್ಲಿ ಬದುಕುವ ನಮಗೆ ಬಿಜೆಪಿ ಸರ್ಕಾರದಿಂದ ಅನ್ಯಾಯವಾಗುತ್ತಿದೆ. ಬಿಜೆಪಿ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯಿದೆ ಸಂವಿಧಾನ ವಿರೋಧಿಯಾಗಿದ್ದು, ಇದನ್ನು ಎಲ್ಲರೂ ಒಗ್ಗಟ್ಟಿನಿಂದ ವಿರೋಧಿಸಬೇಕೆಂದು ಜಿ.ಪಂ ಸದಸ್ಯೆ ಮಮತಾ ಗಟ್ಟಿ ಹೇಳಿದರು.
ಪೌರತ್ವ ಮಸೂದೆ ವಿರೋಧಿಸಿ ಉಳ್ಳಾಲ ಮತ್ತು ಮುಡಿಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಕೇಂದ್ರ ಸರಕಾರ ಜಾತಿ ಧರ್ಮದಡಿಯಲ್ಲಿ ನಮ್ಮನ್ನು ವಿಂಗಡನೆ ಮಾಡುವ ಅಗತ್ಯವಿಲ್ಲ. ಪ್ರಸಕ್ತ ಕಾಲದಲ್ಲಿ ಮಹಿಳೆಯರಿಗೆ ಭೀತಿಯ ವಾತಾವರಣ ನಿರ್ಮಾಣ ಆಗಿದೆ. ಪ್ರಾಕೃತಿಕ ವಿಕೋಪಕ್ಕೆ ಪರಿಹಾರ ನೀಡದ ಸರಕಾರ ಪೌರತ್ವ ತಿದ್ದುಪಡಿ ಕಾಯಿದೆ ಮೂಲಕ ಒಡೆದು ಆಳುವ ನೀತಿ ಜಾರಿಗೆ ತರುತ್ತಿದೆ ಎಂದು ಅವರು ಆರೋಪಿಸಿದರು.
ನಗರಾಭಿವೃದ್ಧಿ ಪಾದಿಕಾರದ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಮಾತನಾಡಿ, ಬಿಜೆಪಿ ಸರಕಾರ ಆಡಳಿತಕ್ಕೆ ಬಂದು ಏನು ಅಭಿವೃದ್ಧಿ ಮಾಡಿದೆ ಎನ್ನುವುದು ಎಲ್ಲಾ ವರ್ಗದ ಪ್ರಶ್ನೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಗಗನಕ್ಕೇರಿದೆ. ಮೋದಿ ಮತ್ತು ಅಮಿತ್ ಷಾ ಆಡಳಿತದಿಂದ ಜನರು ರೋಸಿ ಹೋಗಿದ್ದಾರೆ. ದೇಶಕ್ಕೆ ಅಂಬೇಡ್ಕರ್ ನೀಡಿದ ಒಳ್ಳೆಯ ಸಂವಿಧಾನವನ್ನು ಅಮೆರಿಕ, ಚೀನಾ ಒಪ್ಪಿಕೊಂಡರೂ ಭಾರತ ಒಪ್ಪುವುದಿಲ್ಲ. ಇದನ್ನೇ ತಿದ್ದುಪಡಿ ಮಾಡಿ ಧರ್ಮದಡಿಯಲ್ಲಿ ವಿಂಗಡಿಸಲು ಸರ್ಕಾರ ಹೊರಟಿದೆ ಎಂದು ಆಪಾದಿಸಿದರು.
ಕೆಪಿಸಿಸಿ ಸದಸ್ಯ ಈಶ್ವರ ಉಳ್ಳಾಲ ಮಾತನಾಡಿ, ಸ್ವಾತಂತ್ರ್ಯ ಹೋರಾಟ ಮಾಡುವಾಗ ಜಾತಿ ಧರ್ಮ ಇರಲಿಲ್ಲ, ಈಗ ಸ್ವಾತಂತ್ರ್ಯಕ್ಕೆ ಹೋರಾಟ ಮಾಡದವರು ಸಂವಿಧಾನವನ್ನು ತಿದ್ದುಪಡಿ ಮಾಡಲು ಹೊರಟಿದ್ದಾರೆ. ಸರ್ಕಾರ ದಿವಾಳಿಯಾಗಿದೆ ಎಲ್ಲವನ್ನು ಮಾರಿ ರೈಲು ಇಲಾಖೆಯನ್ನು ಕೂಡಾ ಮಾರಾಟ ಮಾಡಲು ಸಜ್ಜಾಗಿದೆ. ಆರ್ಥಿಕ ಪರಿಸ್ಥಿತಿ ಸರಿ ಮಾಡುವ ಬದಲು ಜಾತಿ ವಿಂಗಡನೆ ಮಾಡುವ ಕಾಯಿದೆ ಜಾರಿಗೆ ತರುವ ಅಗತ್ಯವೇನಿದೆ ಎಂದು ಪ್ರಶ್ನಿಸಿದರು.
ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಮಹಮ್ಮದ್ ಮುಕ್ಕಚೇರಿ, ಉಮರ್ ಪಜೀರ್ ಮಾತನಾಡಿದರು.
ಕಾಂಗ್ರೆಸ್ ಮುಖಂಡರಾದ ಎನ್.ಎಸ್. ಕರೀಂ, ಹೈದರ್ ಕೈರಂಗಳ,ಹಮೀದ್, ಉಮರ್ ಪಜೀರ್, ನಾಸಿರ್ ಸಾಮಣೆಗೆ, ರಹ್ಮಾನ್ ಕೋಡಿಜಾಲ್, ಈಸುಬು ಬಾವ, ಬಾಜಿಲ್ ಡಿ ಸೋಜ, ಮಹಮ್ಮದ್ ಮುಕಚೇರಿ, ಮುರಳೀಧರ ಶೆಟ್ಟಿ, ಕೌನ್ಸಿಲರ್ ಅಯ್ಯೂಬ್ ಮಂಚಿಲ, ಸಲೀಂ ಉಳ್ಳಾಲ, ಇಂತಿಯಾಝ್, ಸಿರಾಜ್ ಕಿನ್ಯ, ಫಾರೂಕ್ ಕಿನ್ಯ, ಹಮೀದ್ ಕಿನ್ಯ, ಯು.ಎ. ಇಸ್ಮಾಯಿಲ್, ಇಸ್ಮಾಯಿಲ್ ದೊಡ್ಡಮನೆ ಮೊದಲಾದವರು ಉಪಸ್ಥಿತರಿದ್ದರು.