"ರಂಗ ಮಂದಿರ ಕಟ್ಟಾಲೆ ಕುಡ್ಲದ ಮರ್ಯಾದಿ ಒರಿಪಾಲೆ"
ಮಂಗಳೂರು: ರಂಗ ಮಂದಿರ ನಿರ್ಮಾಣಕ್ಕಾಗಿ ಜತೆಗೂಡಿದ ಕಲಾವಿದರು
ಮಂಗಳೂರು, ಡಿ.14: ‘‘40 ವರ್ಷೊಡು ಆವಂದಿ ಬೇಲೆ, ನನ ಆಂಡಲಾ ಆವೊಡು ತೂಲೆ...ಕೆಸರ್ ಕಲ್ಲ್ ಪಾಡುನ ಬುಡ್ಲೆ, ಪಂಚಾಗ ಪಾಡಾಲೆ, ರಂಗ ಮಂದಿರ ಕಟ್ಟಾಲೆ..ರಂಗ ಮಂದಿರ ಕಟ್ಟಾಲೆ ಕುಡ್ಲದ ಮರ್ಯಾದಿ ಒರಿಪಾಲೆ..’’ (40 ವರ್ಷಗಳಲ್ಲಿ ಆಗದ ಕೆಲಸ ಈಗಲಾದರೂ ಆಗಲಿ. ಶಿಲಾನ್ಯಾಸ ಮಾಡುವುದು ಬಿಟ್ಟು ಪಂಚಾಂಗ ಹಾಕಿ ರಂಗ ಮಂದಿರ ನಿರ್ಮಿಸಿ. ಮಂಗಳೂರಿನ ಮರ್ಯಾದೆ ಉಳಿಸಿ) ಹೀಗೊಂದು ಹಾಡಿನೊಂದಿಗೆ ಜಿಲ್ಲೆಯಲ್ಲಿ ರಂಗ ಭೂಮಿ ನಿರ್ಮಾಣಕ್ಕಾಗಿ ಒತ್ತಾಯವೊಂದು ನಗರದ ಕುದ್ಮುಲ್ ರಂಗರಾವ್ ಪುರಭವವನದ ಹೊರ ಆವರಣದಲ್ಲಿ ವ್ಯಕ್ತವಾಯಿತು.
ನಾಟಕ, ಸಂಗೀತ, ಯಕ್ಷಗಾನ, ನೃತ್ಯ, ರಂಗಭೂಮಿ, ಜನಪದ, ಚಿತ್ರಕಲೆ ಸೇರಿದಂತೆ ಕಲೆಯ ವಿಭಿನ್ನ ಪ್ರಕಾರಗಳ ಹಿರಿಯ ಕಿರಿಯ ಕಲಾವಿದರನ್ನು ಒಗ್ಗೂಡಿಸಿ ಜಿಲ್ಲಾ ರಂಗ ಮಂದಿರಕ್ಕಾಗಿ ಒತ್ತಾಯಿಸುವ ವಿನೂತನ ಕಾಯರ್ಕ್ರಮವೊಂದು ಇಂದು ನಡೆಯಿತು. ಮಂಗಳೂರು ರಂಗಭೂಮಿ ಸಮಿತಿಯಡಿ ಕಲಾವಿದರನ್ನು ಒಗ್ಗೂಡಿಸಿ ರಂಗಭೂಮಿಯ ನಿರ್ಮಾಣಕ್ಕಾಗಿ ಸರಕಾರ ಹಾಗೂ ಜಿಲ್ಲಾಡಳಿತದ ಗಮನ ಸೆಳೆಯುವ ಪ್ರಯತ್ನ ಇದಾಗಿತ್ತು.
ವೃತ್ತಿಯಲ್ಲಿ ವಕೀಲರಾಗಿರುವ, ಕಲಾವಿದರೂ ಆಗಿರುವ ಶಶಿರಾಜ್ ಕಾವೂರು ಅಧ್ಯಕ್ಷತೆಯಲ್ಲಿ ನಡೆದ ಈ ಕಲಾವಿದರ ಸಮಾವೇಶದಲ್ಲಿ ಗಣೇಶ್ ಸೋಮಯಾಜಿ, ವಿಜಯ ಕುಮಾರ್ ಕೊಡಿಯಾಲ್ಬೈಲ್, ಪ್ರಕಾಶ್ ಪಾಂಡೇಶ್ವರ, ಪಮ್ಮಿ ಕೊಡಿಯಾಲ್ಬೈಲ್, ವಿದ್ಯಾ ಕೋಳ್ಯೂರು, ಚಂದ್ರಶೇಖರ ಶೆಟ್ಟಿ ಸೇರಿದಂತೆ ಜಿಲ್ಲೆಯ ಇತರ ಪ್ರಮುಖ ಕಲಾವಿದರು ಸಮಾವೇಶಗೊಂಡಿದ್ದರು.
ಭಾಸ್ಕರ ಬಂಗೇರ ಗಂಧಕಾಡು ಅವರ ಪಾಡ್ದನದೊಂದಿಗೆ ಸಮಾವೇಶಕ್ಕೆ ಚಾಲನೆ ನೀಡಲಾಯಿತು. ಹರಿಪ್ರಸಾದ್ ಕಾರಂತ ಯಕ್ಷಗಾನ ಸ್ತುತಿಗೀತೆ ಹಾಡಿದರೆ ಇದೇ ಸಂದರ್ಭ ವೇದಿಕೆಯ ಮುಂಭಾಗ ಹಿರಿಯ ಕಲಾವಿದ ಗಣೇಶ್ ಸೋಮಯಾಜಿ ಹಾಗೂ ಮೋಹನ್ ಕುಮಾರ್ ಪೆರ್ಮುದೆಯವರು ಚಿತ್ರ ಬಿಡಿಸುವ ಮೂಲಕ ಸಮಾವೇಶಕ್ಕೆ ಹುರುಪು ತುಂಬಿದರು.
ಮೈಮ್ ರಾಮ್ದಾಸ್ರವರು ರಂಗಮಂದಿರ ಬೇಕೆಂಬ ಹಾಡಿನ ಮೂಲಕ ಗಮನ ಸೆಳೆದರೆ, ವಿನೋದ್ ಶೆಟ್ಟಿ ಬಳಗದವರು ರಂಗಮಂದಿರಕ್ಕಾಗಿ ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ನಡೆದ ಶಿಲಾನ್ಯಾಸ ಕಾರ್ಯಕ್ರಮಗಳು, ಹೋರಾಟಗಳ ಬಗ್ಗೆ ಕಿರು ಪ್ರಹಸನದ ಮೂಲಕ ಬೆಳಕು ಚೆಲ್ಲಿದರು.
ವೇದಿಕೆಯಲ್ಲಿದ್ದ ಕಲಾವಿದರಾದ ನವನೀತ್ ಶೆಟ್ಟಿ, ಕಾಸರಗೋಡು ಚಿನ್ನಾ, ಗೋಪಾಡ್ಕರ್, ರಾಮಚಂದರ್ ಬೈಕಂಪಾಡಿ, ಕಿಶೋರ್ ಡಿ. ಶೆಟ್ಟಿ ಮೊದಾದವರು ಅನಿಸಿಕೆ ವ್ಯಕ್ತಪಡಿಸಿದರು.
ಕಲಾವಿದರನ್ನು ಒಗ್ಗೂಡಿಸುವ ನೇತೃತ್ವ ವಹಿಸಿದ್ದ ಮಂಗಳೂರು ರಂಗಭೂಮಿಯ ಅಧ್ಯಕ್ಷ ಶಶಿರಾಜ್ ಕಾವೂರು ಮಾತನಾಡಿ, ರಂಗ ಮಂದಿರದ ಮುಂದುವರಿದ ಅನುದಾನವಾಗಿ 7 ಕೋಟಿ ರೂ. ಮಂಜೂರು ಆಗಿರುವುದಾಗಿ ಮಾಹಿತಿ ದೊರಕಿದೆ. ಹಾಗಿದ್ದರೆ ಈ ಹಿಂದೆ ಅನುದಾನ ಬಂದಿದ್ದರೆ ಎಲ್ಲಿಗೆ ಹೋಗಿದೆ ಎಂಬ ಬಗ್ಗೆಯೂ ಜಿಲ್ಲಾಡಳಿತ ಮಾಹಿತಿ ಒದಗಿಸಬೇಕು ಎಂದು ಹೇಳಿದರು.
ಇದೇ ವೇಳೆ ಮಂಗಳೂರು ರಂಗ ಭೂಮಿ ವತಿಯಿಂದ ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸಲಾಗಿದ್ದು, ರಂಗ ಮಂದಿರ ಕಾಮಗಾರಿಯನ್ನು ಶೀಘ್ರವಾಗಿ ನೆರವೇರಿಸುವಂತೆ ಆಗ್ರಹಿಸಲಾಗಿದೆ.
ರಂಗಮಂದಿರಕ್ಕಾಗಿ ಈಗಾಗಲೇ ಪುರಭವನದ ಬಳಿ, ಕರಾವಳಿ ಉತ್ಸವ ಮೈದಾನದ ಹಿಂದುಗಡೆ, ಕದ್ರಿ ಜಿಂಕೆ ಪಾರ್ಕ್, ಬೊಂದೇಲ್ಗಳಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿದೆ. ನೀಲ ನಕ್ಷೆಗಳಿಗಾಗಿಯೇ ಸುಮಾರು 10 ಲಕ್ಷ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಇದೀಗ ಕೊನೆಯ ಬಾರಿಗೆ ಬೊಂದೇಲ್ನಲ್ಲಿ ಶಂಕು ಸ್ಥಾಪನೆ ಮಾಡಲಾಗಿರುವ ಜಾಗ ರಂಗಮಂದಿರಕ್ಕೆ ಸೂಕ್ತವಾಗಿದೆ. 2014ನೆ ಇಸವಿಯಲ್ಲಿ ಈ ಜಾಗದ ಪಹಣಿ ಪತ್ರ ಕೂಡ ರಂಗ ಮಂದಿರ, ಕನ್ನಡ ಸಂಸ್ಕೃತಿ ಇಲಾಖೆಯ ಹೆಸರಿನಲ್ಲಿ ಬದಲಾವಣೆಯಾಗಿರುತ್ತದೆ. ಈ ಜಾಗದಲ್ಲಿ ಶೀಘ್ರ ರಂಗ ಮಂದಿರ ನಿರ್ಮಾಣ ಮಾಡಬೇಕು ಹಾಗೂ ನಿರ್ಮಾಣಕ್ಕೆ ಮೊದಲು ರಂಗ ಮಂದಿರದ ಬಗ್ಗೆ ಅನುಭವಿಗಳನ್ನು ಒಗ್ಗೂಡಿಸಿ ಸಲಹಾ ಸಮಿತಿ ರಚಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಭಾಗವಹಿಸಿದ್ದ ಹಿರಿಯ ಕಲಾವಿದರು, ವಿದ್ವಾಂಸರು ಹೇಳಿದ್ದು......
ರಂಗ ಮಂದಿರ ಬೇಕು ಎನ್ನುವುದು ನಮ್ಮ ಹಕ್ಕಾಗಿದ್ದರೆ, ಅದು ಆಗಬೇಕೆನ್ನುವುದು ನಮ್ಮ ಒತ್ತಾಯ. ರಂಗಮಂದಿರ ನಿರ್ಮಾಣಕ್ಕಾಗಿ ಈಗಾಗಲೇ ಹಣವನ್ನು ಕ್ರೋಢೀಕರಿಸಲಾಗಿತ್ತು. ಆದರೆ ಆ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಲಾಗಿದೆ ಎಂದೂ ಹೇಳಲಾಗುತ್ತಿದೆ. ಒಂದು ವೇಳೆ ಹಣವನ್ನು ಬೇರೆ ಉದ್ದೇಶಕ್ಕೆ ವರ್ಗಾಯಿಸಲಾಗಿದ್ದರೆ, ರಂಗಮಂದಿರಕ್ಕಾಗಿ ಇತರ ಮೂಲದಿಂದ ಹಣವನ್ನು ಒದಗಿಸಿ ಶೀಘ್ರವೇ ರಂಗ ಮಂದಿರ ನಿರ್ಮಾಣ ಕಾರ್ಯ ಆಗಬೇಕು.
-ಡಾ. ಚಿನ್ನಪ್ಪ ಗೌಡ, ವಿಶ್ರಾಂತ ಉಪ ಕುಲಪತಿ ಹಾಗೂ ಜನಪದ ವಿದ್ವಾಂಸರು.
ರಂಗಮಂದಿರಕ್ಕಾಗಿ ಕಳೆದ 40 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಇದೀಗ ಸರಕಾರ ರಂಗಮಂದಿರಕ್ಕಾಗಿ 7 ಕೋಟಿ ರೂ.ಗಳನ್ನು ಅನುದಾನ ಒದಗಿಸುತ್ತಿರುವುದು ಸಂತಸದ ವಿಚಾರ. ಸರಕಾರ ಆದಷ್ಟು ಬೇಗ ಆಧುನಿಕ ಚಿಂತನೆಯಿಂದ ಕೂಡಿದ ರಂಗಮಂದಿರವನ್ನು ಕಲಾವಿದರಿಗಾಗಿ ಒದಗಿಸಬೇಕು ಎಂದರು.
-ಡಾ. ಪ್ರಭಾಕರ ಜೋಶಿ, ಹಿರಿಯ ವಿದ್ವಾಂಸ, ಯಕ್ಷಗಾನ ಕಲಾವಿದರು.
ರಂಗಮಂದಿರವನ್ನು ಅತ್ಯಂತ ಶೀಘ್ರ ಹಾಗೂ ಉತ್ತಮವಾಗಿ ನಿರ್ಮಾಣ ಮಾಡುವಲ್ಲಿ ಕಲಾವಿದರು ಒಗ್ಗಟ್ಟಾಗಿದ್ದು, ಸವಾಲುಗಳನ್ನು ಎದುರಿಸಬೇಕಾಗಿದೆ. ರಂಗ ಮಂದಿರ ನಿರ್ಮಾಣಕ್ಕಾಗಿ ಸಲಹಾ ಸಮಿತಿಯ ರಚನೆಯಾಗಬೇಕು.
-ಡಾ. ನಾ. ದಾಮೋದರ ಶೆಟ್ಟಿ, ಸಾಹಿತಿ.
ಕಲಾವಿದರು ಹೋರಾಟ ಮಾಡುವುದು ಅಪರೂಪ. ಆದರೆ ರಂಗ ಮಂದಿರದಲ್ಲಿ ರಂಜಿಸಬೇಕಾದ ಕಲಾವಿದರು ಇಂದು ಬೀದಿ ಇಳಿಯಬೇಕಾಗಿದೆ. ಹೋರಾಟ ನಡೆಸದೆ ಸರಕಾರದ ಸವಲತ್ತು ಪಡೆಯುವುದು ಅಸಾಧ್ಯ. ರಂಗ ಮಂದಿರ ಜಿಲ್ಲೆಯಲ್ಲಿ ಮಾತ್ರವಲ್ಲ, ಪ್ರತಿ ತಾಲೂಕು ಹಾಗೂ ಗ್ರಾಮಗಳಲ್ಲೂ ಆಗಬೇಕಾಗಿದೆ.
-ಸರಪಾಡಿ ಅಶೋಕ್ ಶೆಟ್ಟಿ, ಹಿರಿಯ ಯಕ್ಷಗಾನ ಕಲಾವಿದರು.