ಮನೆಗೆ ನುಗ್ಗಿ ದರೋಡೆಗೆ ಯತ್ನ
ಕಾರ್ಕಳ, ಡಿ.15: ಮನೆಯೊಳಗೆ ನುಗ್ಗಿದ 10 ಮಂದಿ ಯುವಕರ ತಂಡ ದರೋಡೆಗೆ ಯತ್ನಿಸಿರುವ ಘಟನೆ ಡಿ.14ರಂದು ರಾತ್ರಿ 7.45ರ ಸುಮಾರಿಗೆ ಮುಡಾರು ಗ್ರಾಮದ ಸುಮ್ಮಗುತ್ತು ಎಂಬಲ್ಲಿ ನಡೆದಿದೆ.
ಕುಶಲ ಹೆಗ್ಡೆ ಎಂಬವರ ಮನೆಯಲ್ಲಿ ಅವರ ಅಮ್ಮ ಲಲಿತಾ, ತಂಗಿ ಜಯಶ್ರೀ ಹಾಗೂ ಮಗಳು ಅನ್ವಿತಾ ಎಂಬವರು ಟಿವಿ ನೋಡುತ್ತಿರುವಾಗ 10 ಮಂದಿ ಯುವಕರು ಮನೆಗೆ ನುಗ್ಗಿದ್ದು, ಇವರು ಮನೆಯಲ್ಲಿದ್ದವರನ್ನು ಹಿಡಿದು ಬಾಯಿಗೆ, ಕೈಗೆ ಹಾಗೂ ಕಾಲಿಗೆ ಗಮ್ಟೆಪ್ ಹಚ್ಚಿದ್ದರೆನ್ನಲಾಗಿದೆ.
ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಅನ್ವಿತಾಳಿಗೆ ಹಲ್ಲೆ ನಡೆಸಿರುವ ದರೋಡೆ ಕೋರರು, ಲಲಿತಾ ಅವರನ್ನು ದೂಡಿ ಹಾಕಿದ್ದಾರೆ. ಬಳಿಕ ಮನೆಯ ಮಾಳಿಗೆಗೆ ತೆರಳಿದ ದರೋಡೆಕೋರರು, ಕಾಪಾಟು ತೆರೆದು ಸೊತ್ತುಗಳನ್ನು ಕಳವಿಗೆ ಯತ್ನಿಸಿದರು. ಈ ವೇಳೆ ಇವರ ಸಂಬಂಧಿ ಸತ್ಯವತಿ ಬಲ್ಲಾಳ್ ಎಂಬವರು ಮನೆಗೆ ಬಂದಾಗ ದರೋಡೆಕೋರರು ಮನೆಯ ಮುಂದೆ ಇರುವ ಹಾಡಿ ಯೊಳಗೆ ಓಡಿ ಪರಾರಿಯಾದರು. ಹಲ್ಲೆಗೊಳಗಾಗಿರುವ ಲಲಿತಾ ಅವರನ್ನು ಚಿಕಿತ್ಸೆಗೆ ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.