ಕಡಬ: ನದಿಯಲ್ಲಿ ಮುಳುಗಿದ ಯುವಕನ ಮೃತದೇಹ ಪತ್ತೆ
ಕಡಬ, ಡಿ.03. ಠಾಣಾ ವ್ಯಾಪ್ತಿಯ ಕೊಯ್ಲ ಗ್ರಾಮದ ನೀಡೇಲು ಎಂಬಲ್ಲಿ ಗುರುವಾರದಂದು ಕುಮಾರಧಾರ ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹವು ಶುಕ್ರವಾರ ಸಂಜೆ ನದಿಯಲ್ಲಿ ದೊರೆತಿದೆ.
ನಾಪತ್ತೆಯಾದ ವ್ಯಕ್ತಿಯನ್ನು ಕೊಯ್ಲ ಗ್ರಾಮದ ಗುಲ್ಗೋಡಿ ನಿವಾಸಿ ರತ್ನಾಕರ ಕುಮಾರ್ ಯಾನೆ ಉದಯ ಪೂಜಾರಿ(32) ಎಂದು ಗುರುತಿಸಲಾಗಿದೆ.
ಗುರುವಾರ ಸಂಜೀವ ಪೂಜಾರಿ ಮಾರಂಗ, ಹರೀಶ್ ಪಲ್ಲತ್ತಾರು, ಸತ್ಯಾ ರೈ ಸುಣ್ಣಾಡಿ, ಬೇಬಿ ಗೋಳಿತ್ತಡಿ ಎಂಬವರೊಂದಿಗೆ ನದಿಗೆ ತೆರಳಿದ್ದ ರತ್ನಾಕರ್ ನೀರಲ್ಲಿ ಮುಳುಗಿದ್ದರು. ತಕ್ಷಣವೇ ಅವರನ್ನು ಮೆಲಕ್ಕೆತ್ತಲು ಪ್ರಯತ್ನಿಸಿದರೂ ರಕ್ಷಣೆ ಮಾಡಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ರತ್ನಾಕರ ಕುಮಾರ್ ಅವರ ಪತ್ನಿ ಚೈತ್ರಾ ನೀಡಿರುವ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಕಡಬ ಎಸ್ಐ ರುಕ್ಮ ನಾಯ್ಕ್, ಎಎಸ್ಐ ರವಿ ಭೇಟಿ ನೀಡಿದ್ದಾರೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಮುಳುಗು ತಜ್ಞರು ನದಿಯಲ್ಲಿ ಮೃತದೇಹಕ್ಕಾಗಿ ಹುಡುಕಾಟ ನಡೆಸಿದರೂ ಸಂಜೆಯ ವರೆಗೆ ಪತ್ತೆಯಾಗಿರಲಿಲ್ಲ. ಶುಕ್ರವಾರದಂದು ಮತ್ತೆ ಹುಡುಕಾಟ ನಡೆಸಿದ್ದು, ಸಂಜೆ ವೇಳೆಗೆ ಮೃತದೇಹ ದೊರೆತಿದೆ.