ದೇರಳಕಟ್ಟೆ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ
ಕೊಣಾಜೆ : ಕೇಂದ್ರ ಸರಕಾರ ವ್ಯವಸ್ಥಿತವಾಗಿ ಹಿಂದೂ ಮತ್ತು ಮುಸ್ಲಿಂರನ್ನು ಬೇರ್ಪಡಿಸುವ ಕೃತ್ಯಕ್ಕೆ ಮುಂದಾಗಿದ್ದು ಮುಸ್ಲಿಂ ಸಮುದಾಯವನ್ನು ಇನ್ನಿಲ್ಲವಾಗಿಸುವುದೇ ಪೌರತ್ವ ಮಸೂದೆಯ ಮುಖ್ಯ ಗುರಿ. ಈ ಮಸೂದೆ ಆರ್ ಎಸ್ ಎಸ್ ಸಿದ್ಧಾಂತ ಹಾಗೂ ಮನುಸ್ಮೃತಿಯ ಮುಂದುವರಿದ ಭಾಗ ಎಂದು ಚಿಂತಕ ಬಾಲಕೃಷ್ಣ ಪೆರಾರಿ ಹೇಳಿದರು.
ಪೌರತ್ವ ಮಸೂದೆ ವಿರೋಧಿಸಿ ದೇರಳಕಟ್ಟೆಯ ಪೌರತ್ವ ಸಂರಕ್ಷಣಾ ಸಮಿತಿ ಆಶ್ರಯದಲ್ಲಿ ದೇರಳಕಟ್ಟೆಯ ಶಾಂತಿನಗರ ಮೈದಾನದಲ್ಲಿ ರವಿವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಶಾಸಕ ಯು.ಟಿ.ಖಾದರ್ ಮಾತನಾಡಿ, ಮೋದಿ ಅಮಿತ್ ಷಾ ರಲ್ಲಿ ಪೌರತ್ವ ಮಸೂದೆ ಹಿಂತೆಗೆಯಲು ಭಿಕ್ಷೆ ಬೇಡಿಲ್ಲ. ಭಾರತೀಯತೆ ಏನೆಂದು ತೋರಿಸಲು ಸೇರುತ್ತಿದ್ದೇವೆ. ದೇಶದ ಜನರ ಅಗತ್ಯತೆಯನ್ನು ಈಡೇರಿಸದೆ ಇಂತಹ ಜನವಿರೋಧಿ ಕಾನೂನುಗಳನ್ನು ಜಾರಿಗೊಳಿಸಿ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಇವರದ್ದಾಗಿದೆ ಎಂದು ಹೇಳಿದರು.
ವಕೀಲರಾದ ಸುಧೀರ್ ಕುಮಾರ್ ಮುರೋಳಿ ಮಾತನಾಡಿದರು. ಈ ಸಂದರ್ಭದಲ್ಲಿ ಎಸ್ ವೈಎಸ್ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ. ಅಬ್ದುಲ್ ರಶೀದ್ ಝೈನಿ, ವಕ್ಪ್ ಜಿಲ್ಲಾಧ್ಯಕ್ಷ ಯು.ಕೆ. ಮೋನು, ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗ ಜಿಲ್ಲಾಧ್ಯಕ್ಷ ಎನ್. ಎಸ್. ಕರೀಂ, ತಾಲೂಕು ಪಂ. ಅಧ್ಯಕ್ಷ ಮೊಹಮ್ಮದ್ ಮೋನು, ಮಾಜಿ ಸದಸ್ಯ ಟಿ.ಎಸ್. ಅಬ್ದುಲ್ಲ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಮುಡಾ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಪ್ರತಿಭಟನೆ ಸಭೆಯ ಸಂಚಾಲಕ ಉಸ್ಮಾನ್ ಅಕ್ಸಾ, ಅಬ್ದುಲ್ ಸತ್ತಾರ್, ಅಶ್ರಫ್ ಮಂಚಿ, ಕಬೀರ್ ಹಾಜಿ ಹಾಗೂ ನಾಸಿರ್ ದೇರಳಕಟ್ಟೆ ಉಪಸ್ಥಿತರಿದ್ದರು. ನೌಫಲ್ ಕೆ.ಬಿ.ಎಸ್ ಕಾರ್ಯಕ್ರಮ ನಿರೂಪಿಸಿದರು.