ಜ್ಞಾನ ಸಂಪತ್ತಿನ ವಿನಿಮಯ ಅತ್ಯಗತ್ಯ: ಯಡಪಡಿತ್ತಾಯ
ಸುರತ್ಕಲ್, ಜ.13: ಆಧುನಿಕ ಕಾಲಘಟ್ಟದಲ್ಲಿ ತಂತ್ರಜ್ಞಾನ ಗುಣಮಟ್ಟವನ್ನು ಇಮ್ಮಡಿಗೊಳಿಸುವ ಕಾರ್ಯತಂತ್ರದಲ್ಲಿ ಭೌಗೋಳಿಕ ಅರ್ಥಶಾಸ್ತ್ರ ವನ್ನು ನಿರ್ವಹಿಸುವುದು ಅತ್ಯಗತ್ಯ. ಜ್ಞಾನ ಹಾಗೂ ಸಂಬಂಧಗಳನ್ನು ಒಗ್ಗೂಡಿಸುವ ಮೂಲಕ ಕಾರ್ಯನಿರ್ವಹಿಸುವ ಕ್ಷಮತೆಯನ್ನು ಬೆಳೆಸಿ ಕೊಳ್ಳಬೇಕಾಗಿದೆ. ತಂತ್ರಜ್ಞಾನದ ಯುಗದಲ್ಲಿ ನಮ್ಮಲ್ಲಿನ ಜ್ಞಾನ ಸಂಪತ್ತನ್ನು ವಿನಿಮಯ ಮಾಡಿಕೊಳ್ಳುವುದು ಅತ್ಯಗತ್ಯ ಎಂದು ಮಂಗಳೂರು ವಿವಿ ಕುಲಪತಿ ಡಾ.ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಹೇಳಿದರು.
ಸುರತ್ಕಲ್ ಗೋಂದದಾಸ ಕಾಲೇಜಿನಲ್ಲಿ ಆಯೋಜಿಸಲಾದ ‘ಬೌದ್ಧಿಕ ಹಾಗೂ ನವೀನ ನಿರ್ವಹಣಾ ಪದ್ಧತಿಯಲ್ಲಿನ ಸವಾಲುಗಳು ಮತ್ತು ಸಾಧ್ಯತೆ ಗಳು’ ಎಂಬ ವಿಷಯದ ಕುರಿತು ಅಂತರ್ರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಫ್ರಾನ್ಸ್ನ ಸ್ಕೇಮ ಬ್ಯುಸಿನೆಸ್ ಸ್ಕೂಲ್ನ ಪ್ರಾಧ್ಯಾಪಕ ಪ್ರೊ. ಅಮತಾಬ್ ಆನಂದ್ ಅಂತಾರಾಷ್ಟ್ರೀಯ ಕಾರ್ಯಗಾರದ ಪ್ರಬಂಧ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರತ್ಕಲ್ ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಡಾ.ಕೆ. ಶಿವಶಂಕರ್ ಭಟ್ ವಹಿಸಿದ್ದರು. ಕಾರ್ಯಗಾರ ದಲ್ಲಿ ಸಹ ಸಂಯೋಜಕ ಸಾಜನ್ ಎಂ.ಆಚಾರ್ಯ, ಹಿಂದೂ ವಿದ್ಯಾದಾಯಿನಿ ಸಂಘದ ಉಪಾಧ್ಯಕ್ಷೆ ಐ. ಉಮಾದೇವಿ, ಕಾರ್ಯದರ್ಶಿ ಎಂ. ವೆಂಕಟ್ರಾವ್, ಪ್ರೊ.ರಮೇಶ್ ಕುಳಾಯಿ ಮತ್ತಿತ್ತರು ಉಪಸ್ಥಿತರಿದ್ದರು. ಸಮಾವೇಶದ ಸಂಯೋಜಕ ಡಾ.ಹಬರ್ಟ್ ನಜರತ್ ಸ್ವಾಗತಿಸಿದರು. ಗಣೇಶ್ ಆಚಾರ್ಯ ಬಿ.ವಂದಿಸಿದರು. ಶಿವಾನಿ ಕಾರ್ಯಕ್ರಮ ನಿರೂಪಿಸಿದರು.