ಜ.16ರಿಂದ ಪೊಲಿಪು ಖುವ್ವತುಲ್ ಇಸ್ಲಾಮ್ ಅಸೋಸಿಯೇಶನ್ 30ನೆ ವರ್ಷಾಚರಣೆ ಸಂಭ್ರಮ
ಕಾಪು, ಜ.14: ಪೊಲಿಪು ಜಾಮೀಯ ಮಸೀದಿ ವ್ಯಾಪ್ತಿಯಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಸೇವೆ ನೀಡುವ ಉದ್ದೇಶದಿಂದ 1990ರಲ್ಲಿ ಸ್ಥಾಪನೆಗೊಂಡ ಖುವ್ವತುಲ್ ಇಸ್ಲಾಮ್ ಯಂಗ್ಮೆನ್ಸ್ ಅಸೋಸಿಯೇಶನ್ ಇದೀಗ 30ನೆ ವರ್ಷಾಚರಣೆಯ ಸಂಭ್ರಮದಲ್ಲಿದ್ದು, ಈ ಪ್ರಯುಕ್ತ ಜ.16ರಿಂದ 19ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಪೊಲಿಪು ಜಾಮೀಯ ಮಸೀದಿಯ ವಠಾರದಲ್ಲಿ ಜ.16ರಂದು ಸಂಜೆ 5ಗಂಟೆಗೆ ಧ್ವಜಾರೋಹಣ ನೆರವೇರಿಸುವ ಮೂಲಕ 30ನೆ ವಾರ್ಷಿಕೋತ್ಸವ ಸಮಾರಂಭಕ್ಕೆ ಚಾಲನೆ ನೀಡಲಾಗುವುದು. ಜಿಲ್ಲಾ ಸಂಯುಕ್ತ ಖಾಝಿ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ಉದ್ಘಾಟಿಸಲಿದ್ದು, ಇದೇ ಸಂದರ್ಭದಲ್ಲಿ ಮರ ಚೌಕಳಿಯನ್ನು ದರ್ಗಾದ ಮುಖಾಮಿಗೆ ಸಮರ್ಪಿಸಲಾಗುವುದು. ಬಳಿಕ ಅಸ್ಮಾಹುಲ್ ಹುಸ್ನಾ ಕಾರ್ಯಕ್ರಮ ಕಿಲ್ಲೂರು ತಂಙಳ್ ನೇತೃತ್ವದಲ್ಲಿ ಜರಗಲಿದೆ ಎಂದು ಸಂಸ್ಥೆಯ ಗೌರವಾಧ್ಯಕ್ಷ ಬಶೀರ್ ಜನಪ್ರಿಯ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಜ.17ರಂದು ಸಂಜೆ 6ಗಂಟೆಗೆ ತಮಿಳುನಾಡಿನ ಏರ್ವಾಡಿ ಅಬೂ ತಾಹಿರ್ ಉಸ್ತಾದ್ ತಂಡದಿಂದ ಅಜ್ಮೀರ್ ಮೌಲಿದ್ ಮಜ್ಲಿಸ್ ನಡೆಯಲಿದೆ. ನಂತರ ರಾಜ್ಯಮಟ್ಟದ ಆಯ್ದ ತಂಡಗಳ ದಫ್ ಸ್ಪರ್ಧೆ ನಡೆಯಲಿದೆ. ವಿಜೇತ ತಂಡ ಗಳಿಗೆ ನಗದು ಮತ್ತು ಟ್ರೋಫಿ ನೀಡಲಾಗುವುದು.
ಜ.18ರಂದು ಸಂಜೆ 6ಗಂಟೆಗೆ ಸಯ್ಯದ್ ಜಲಾಲುದ್ದೀನ್ ಇಹ್ಸಾನಿ ತಂಙಳ್ ಕುತ್ತಾರ್ ನೇತೃತ್ವದಲ್ಲಿ ಆಧ್ಯಾತ್ಮಿಕ ಮಜ್ಲಿಸ್, ಹಾಫಿಝ್ ಮುಹಮ್ಮದ್ ಸ್ವಾಧಿಖ್ ಫಾಲಿಲಿ ಗೂಡಲ್ಲೂರು ಬಳಗದಿಂದ ಬೃಹತ್ ಬುರ್ದಾ ಮಜ್ಲಿಸ್ ಹಾಗೂ ಶಾಹಿನ್ ಬಾಬು, ನಾಸೀಫ್ ಕೊಯಿಕ್ಕೋಡು ಇವರಿಂದ ನಆತೇ ಶರೀಫ್ ನಡೆಯಲಿದೆ.
ಜ.19ರಂದು ಬೆಳಗ್ಗೆ 10ಗಂಟೆಗೆ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಮೂರು ಬಡ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಲಿದೆ. ನಿಖಾಃ ನೇತೃತ್ವವನ್ನು ಕಾಜೂರು ತಂಙಳ್ ವಹಿಸಲಿರುವರು. ಇದೇ ಸಂದರ್ಭದಲ್ಲಿ ಜಿಲ್ಲೆಯ ಹಿರಿಯ ಉಸ್ತಾದ್ ಪಿ.ಬಿ.ಅಹಮದ್ ಮುಸ್ಲಿ ಯಾರ್ ಕಾಪು ಅವರನ್ನು ಸನ್ಮಾನಿಸಲಾಗುವುದು.
ಸಮಾರೋಪ ಸಮಾರಂಭ ದಲ್ಲಿ ಬೊಳ್ಳೂರು ಉಸ್ತಾದ್, ಪೂಂಜಾಲಕಟ್ಟೆ ಉಸ್ತಾದ್ ಭಾಗವಹಿಸಲಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಅಕ್ರಂ ಗುಡ್ವಿಲ್, ಕಾರ್ಯದರ್ಶಿ ರಜಬ್, ಸಲಹೆಗಾರರಾದ ಹುಸೈನಾರ್, ಅಫೀಝ್, ಸದಸ್ಯ ಆರೀಸ್ ಉಪಸ್ಥಿತರಿದ್ದರು.