ಆದಿವಾಸಿಗಳು ದಾಖಲೆ ಎಲ್ಲಿಂದ ತರಬೇಕು? : ಕಾವೂರು ಪ್ರತಿಭಟನಾ ಸಭೆಯಲ್ಲಿ ಪತ್ರಕರ್ತ ರಾ.ಚಿಂತನ್ ಪ್ರಶ್ನೆ
ಮಂಗಳೂರು, ಜ.14: ಆಧಾರ್ ಕಾರ್ಡ್, ವೋಟರ್ ಐಡಿ, ಪಾನ್ ಕಾರ್ಡ್ ಯಾವುದೂ ಪೌರತ್ವ ಸಾಬೀತುಪಡಿಸಲ್ಲ ಎನ್ನುವುದಾದರೆ ಕೂಲಿ ಮಾಡಿಕೊಂಡು ಬದುಕುತ್ತಿರುವ ಈ ದೇಶದ ಜನರು ತಲೆಮಾರುಗಳ ಕಾಗದ ಪತ್ರಗಳನ್ನು ಹೇಗೆ ಇಟ್ಟುಕೊಳ್ಳುತ್ತಾರೆ. ಮಣ್ಣಿನ ಮೂಲ ಜೀವಿಗಳಾದ ಆದಿವಾಸಿಗಳಲ್ಲಿ ದಾಖಲೆಗಳು ಇರುವುದಾದರು ಹೇಗೆ ಎಂದು ಪತ್ರಕರ್ತ ರಾ.ಚಿಂತನ್ ಪ್ರಶ್ನಿಸಿದರು.
ಕೂಳೂರು-ಕಾವೂರು ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ಎನ್ಆರ್ಸಿ, ಸಿಎಎ, ಎನ್ಪಿಆರ್ ಕೇಂದ್ರ ಸರಕಾರ ಜಾರಿಗೆ ತಂದ ಕಾಯ್ದೆಯ ವಿರುದ್ಧ ಕಾವೂರು ಶಾಂತಿನಗರದ ಮೈದಾನದಲ್ಲಿ ಮಂಗಳವಾರ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಎನ್ಆರ್ಸಿ ಅಂದ್ರೆ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲದೇಶದ ಹಿಂದೂಗಳಿಗೆ ಕಾಗದ ಪತ್ರಕೊಟ್ಟು ಪೌರತ್ವ ನೀಡಿ, ಕಾಗದ ಪತ್ರಗಳಿರದ ಇಲ್ಲಿಯ ಹಿಂದೂಗಳ ಪೌರತ್ವ ರದ್ದುಗೊಳಿಸುವಂತದ್ದಾಗಿದೆ ಎಂದು ಹೇಳಿದರು.
ಭಾರತೀಯರಿಗೆ ಎನ್ಆರ್ಸಿಯಿಂದ ತೊಂದರೆ ಇಲ್ಲ ಎನ್ನುವುದನ್ನು ಪ್ರಧಾನಿ ಹೇಳಿದ್ದಾರೆ. ಅದೇ ರೀತಿ ಇದರಿಂದ ಆದಿವಾಸಿ ಗಳಿಗೆ ಅಲೆಮಾರಿಗಳಿಗೂ ತೊಂದರೆ ಇಲ್ಲ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಇದು ಕೇವಲ ಮುಸ್ಲಿಮರಿಗೆ ಮಾತ್ರವಲ್ಲ, ಹಿಂದೂಗಳ ಮೇಲೂ ಪರಿಣಾಮ ಬೀರುತ್ತದೆ. ಇದಕ್ಕೆ ಪೌರತ್ವದಿಂದ ಹೊರಗುಳಿದ ಅಸ್ಸಾಂನ 13 ಲಕ್ಷ ಜನ ಹಿಂದೂಗಳು ಸಾಕ್ಷಿಯಾಗಿ ಇದ್ದಾರೆ ಎಂದರು.
ರಮ್ಜಾನ್ಗೆ ಬಿರಿಯಾನಿ, ದೀಪಾವಳಿಗೆ ಹೋಳಿಗೆ ಹಂಚಿಕೊಂಡು ತಿನ್ನುವ ನಮ್ಮಲ್ಲಿ ಮತ್ತೊಮ್ಮೆ ಕೋಮುಭಾವನೆ ಬಲಗೊಳಿಸುವ ಈ ರೀತಿಯ ಕಾನೂನು ಅಗತ್ಯವಿಲ್ಲ. ಕುಸಿಯುತ್ತಿರುವ ಜಿಡಿಪಿಯ ನಡುವೆ ಈ ಕೋಟ್ಯಂತರ ರೂಪಾಯಿ ಖರ್ಚು ಮಾಡಿಕೊಂಡು ಕಾನೂನು ಜಾರಿಗೊಳಿಸುವ ಸರಕಾರದ ಮೂರ್ಖತನಕ್ಕೆ ಏನು ಹೇಳಬೇಕೊ ಗೊತ್ತಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕ್ರೈಸ್ತ ಮುಖಂಡ ಅಲ್ಫೋನ್ಸ್ ಪ್ರಾಂಕೊ ಮಾತನಾಡಿ, ‘ಸದಾ ಸುಳ್ಳು ಹೇಳುವ ಮೋದಿಯವರೆ ಮೊದಲು ನಿಮ್ಮ ಜಾತಕ ಹೇಳಿ ಆಮೇಲೆ ನಮ್ಮನ್ನು ಕೇಳಿ. ಏಸುಕ್ರಿಸ್ತನ ಮೂರ್ತಿ ಉರುಳಿಸಲು ಹೊರಟ ಭಟ್ಟನೋರ್ವ ಹುಚ್ಚ, ಹುಚ್ಚು ನಾಯಿಗೆ ನಾವು ಕಚ್ಚಿದರೆ ನಮಗೂ ಹುಚ್ಚು ಹಿಡಿಯುತ್ತದೆ’ ಎಂದು ಕಲ್ಲಡ್ಕ ಪ್ರಭಾಕರ ಭಟ್ಟರ ವಿರುದ್ಧ ಹರಿಹಾಯ್ದರು.
ಪ್ರಗತಿಪರ ಚಿಂತಕ ಬಿ.ಆರ್. ಭಾಸ್ಕರ್ ಪ್ರಸಾದ್, ಎಸ್ವೈಎಸ್ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ಎಂಎಸ್ಎಂ ಅಬ್ದುಲ್ ರಶೀದ್ ಝೈನಿ ಕಾಮಿಲ್, ಎಸ್ಕೆಎಸ್ಎಸ್ಎಫ್ ರಾಜ್ಯ ಸಂಚಾಲಕ ಇಕ್ಬಾಲ್ ಬಾಳಿಲ, ಎಸ್ಕೆಎಸ್ಎಂ ಪ್ರಧಾನ ಕಾರ್ಯದರ್ಶಿ ಎಂ.ಜಿ. ಮುಹಮ್ಮದ್, ಡಿವೈಎಫ್ಐ ಮಾಜಿ ರಾಜ್ಯಾಧ್ಯಕ್ಷ ಸುನೀಲ್ ಕುಮಾರ್ ಬಜಾಲ್, ಪಿಎಫ್ಐ ದ.ಕ. ಜಿಲ್ಲಾ ಸಮಿತಿಯ ಇಕ್ಬಾಲ್ ಬೆಳ್ಳಾರೆ ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಶೀರ್ ಮದನಿ ಖಾಮಿಲ್ ಸ್ವಾಗತಿಸಿದರು.