ಪತ್ರಕರ್ತರ ಸಂಘದ ರಾಜ್ಯ ಸಮ್ಮೇಳನ: ಮಾಹಿತಿ ಕೈಪಿಡಿ ಬಿಡುಗಡೆ
ಮಂಗಳೂರು, ಜ.21: ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಮಾ.7 ಮತ್ತು 8ರಂದು ನಡೆಯಲಿರುವ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮ್ಮೇಳನ ಪೂರ್ವಭಾವಿಯಾಗಿ ‘ಮಾಹಿತಿ ಕೈಪಿಡಿ’ಯನ್ನು ಶಾಸಕ, ಸಮ್ಮೇಳನ ಕಾರ್ಯಾಧ್ಯಕ್ಷ ಡಿ.ವೇದವ್ಯಾಸ ಕಾಮತ್ ಮಂಗಳವಾರ ನಗರದ ಪತ್ರಿಕಾಭವನದಲ್ಲಿ ಬಿಡುಗಡೆಗೊಳಿಸಿದರು.
ರಾಜ್ಯಮಟ್ಟದ ಸಮ್ಮೇಳನಕ್ಕೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧನಿದ್ದು, ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುವು ದಾಗಿ ಶಾಸಕ ವೇದವ್ಯಾಸ ಕಾಮತ್ ಭರವಸೆ ನೀಡಿದರು.
ಸಮ್ಮೇಳನ ಸಮಿತಿ ಸಂಚಾಲಕ, ಶಾಸಕ ಡಾ. ವೈ. ಭರತ್ ಶೆಟ್ಟಿ, ಮಂಗಳೂರು ಆತಿಥ್ಯಕ್ಕೆ ಉತ್ತಮ ಹೆಸರು ಪಡೆದಿದ್ದು, ಆದ್ದರಿಂದಲೇ ಹೊರಗಿನವರು ಮಂಗಳೂರನ್ನು ಹೆಚ್ಚು ಇಷ್ಟ ಪಡುತ್ತಾರೆ. ಇಂತಹ ಸಮ್ಮೇಳನದಿಂದ ಧಾರ್ಮಿಕ ಮತ್ತು ಬೀಚ್ ಪ್ರವಾಸೋದ್ಯಮಕ್ಕೆ ಅವಕಾಶ ಸಿಗುವುದರ ಜತೆಗೆ ಮಂಗಳೂರಿನ ಬ್ರಾಂಡ್ ವ್ಯಾಲ್ಯೂ ಕೂಡ ಹೆಚ್ಚಾಗಲಿದೆ ಎಂದರು.
ಮಂಗಳೂರು ಸಿಟಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್ರಾಜ್ ಆಳ್ವ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ,ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ರಾಜ್ಯ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಖಾದರ್ ಶಾ ಉಪಸ್ಥಿತರಿದ್ದರು. ವಿಜಯ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.
ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡುವ ಕುರಿತು ಸಮ್ಮೇಳನದಲ್ಲಿ ಹಕ್ಕೊತ್ತಾಯ ಮಾಡಬೇಕು. ಜಿಲ್ಲೆಯ ಖಾಸಗಿ ಸಾರಿಗೆ ವ್ಯವಸ್ಥೆ ಜನರಿಗೆ ಉತ್ತಮ ಸೇವೆ ನೀಡುತ್ತಿದ್ದು, ಈ ಕುರಿತು ಚರ್ಚೆಯಾಗಬೇಕು.
-ದಿಲ್ರಾಜ್ ಆಳ್ವ, ಅಧ್ಯಕ್ಷರು, ಸಿಟಿ ಬಸ್ ಮಾಲೀಕರ ಸಂಘ, ಮಂಗಳೂರು