ಕೌಶಲ್ಯವನ್ನು ಮೈಗೂಡಿಸಿಕೊಂಡು ಸ್ವಉದ್ಯೋಗಿಗಳಾಗಲು ಕರೆ
ಉಡುಪಿ, ಜ.21: ನಿರ್ದಿಷ್ಟ ಕ್ಷೇತ್ರದಲ್ಲಿ ಪರಿಶ್ರಮದಿಂದ ಕೌಶಲ್ಯವನ್ನು ಮೈಗೂಡಿಸಿಕೊಂಡು ಸೂಕ್ತ ಯೋಜನಾ ದಾಖಲಾತಿಗಳೊಂದಿಗೆ ರಾಷ್ಟ್ರೀಕೃತ ಬ್ಯಾಂಕ್ಗಳ ಮೂಲಕ, ಸರಕಾರಗಳಿಂದ ದೊರೆಯುವ ಧನಸಹಾಯ ಹಾಗೂ ಸಹಾಯಧನ ಯೋಜನೆಗಳ ಸಂಪೂರ್ಣ ಸದುಪಯೋಗ ಪಡೆದು ಆರ್ಥಿಕ ಸ್ವಾವಲಂಬನೆಗಾಗಿ ನಿರುದ್ಯೋಗಿ ಯುವಜನತೆ ಮುಂದಾಗಬೇಕೆಂದು ಸಿಡಾಕ್ ಜಿಲ್ಲಾ ಜಂಟಿ ನಿರ್ದೇಶಕ ಅರವಿಂದ ಬಾಳೇರಿ ಕರೆ ನೀಡಿದ್ದಾರೆ.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ವತಿಯಿಂದ ಉಡುಪಿಯಲ್ಲಿ ಇತ್ತೀಚೆಗೆ ನಿರುದ್ಯೋಗಿ ಯುವಜನತೆಗೆ ಆಯೋಜಿಸಲಾದ 6 ದಿನಗಳ ಕೌಶಲ್ಯ ಉದ್ಯೋಗ ಅಭಿವೃದ್ಧಿ ಶಿಬಿರದ ಅದ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಭಾಸ್ಕರ್ ಆಮೀನ್ ಮಾತನಾಡಿ ಸರಕಾರ ಹಾಗೂ ಸರಕಾ ರೇತರ ಸಂಸ್ಥೆಗಳ ತರಬೇತಿ ಪಡೆದುಕೊಂಡು ಸ್ವಉದ್ಯೋಗದ ಮೂಲಕ ಆರ್ಥಿಕ ಸದೃಢತೆಯನ್ನು ಸಾಧಿಸಿಕೊಳ್ಳ ಬೇಕೆಂದು ತಿಳಿಸಿದರು.
ಸಿಡಾಕ್ ಕೇಂದ್ರದ ವ್ಯವಸ್ಥಾಪಕ ಪೃಥ್ವಿರಾಜ್ ಎಮ್. ನಾಯಕ್ ಸ್ವಾಗತಿಸಿ ದರು. ಜಿಲ್ಲೆಯ ಸುಮಾರು 30 ಮಂದಿ ಫಲಾನುಭವಿ ಗಳು ಶಿಬಿರದಲ್ಲಿ ಭಾಗವಹಿಸಿದ್ದರು.