ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ ಪ್ರಕರಣ: ಆರೋಪಿಯನ್ನು ಮಂಗಳೂರಿಗೆ ಕರೆತಂದ ಪೊಲೀಸರು
ಮಂಗಳೂರು, ಜ. 22: ಬಜ್ಪೆಯ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ಯಾಗ್ವೊಂದರಲ್ಲಿ ಸ್ಫೋಟಕ ಇರಿಸಿದ್ದ ಪ್ರಕರಣದ ಆರೋಪಿ ಆದಿತ್ಯ ರಾವ್ ನನ್ನು ಮಂಗಳೂರು ಪೊಲೀಸರು ಬೆಂಗಳೂರಿನಿಂದ ವಿಮಾನದ ಮೂಲಕ ಮಂಗಳೂರಿಗೆ ಬುಧವಾರ ರಾತ್ರಿ ಕರೆ ತಂದಿದ್ದಾರೆ.
ಸಾಕಷ್ಟು ಸಂಖ್ಯೆಯ ಪೊಲೀಸರ ಸರ್ಪಗಾವಲಿನಲ್ಲಿ ಆರೋಪಿಯನ್ನು ವಿಮಾನ ನಿಲ್ದಾಣದಿಂದ ಮಂಗಳೂರು ಪೊಲೀಸರು ವಶಕ್ಕೆ ಪಡೆದರು. ವಿಶೇಷ ಭದ್ರತೆ ಇದ್ದ ಕಾರಿನಲ್ಲಿ ಪೊಲೀಸರು ಆರೋಪಿಯನ್ನು ಕರೆದುಕೊಂಡು ನಗರಕ್ಕೆ ಧಾವಿಸಿದ್ದಾರೆ. ರಾತ್ರಿ ಇಡೀ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಬೆಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳೂರಿಗೆ ಸಂಜೆ 7:15ಕ್ಕೆ ನಿರ್ಗಮಿಸಿದ ವಿಮಾನದಲ್ಲಿ ಆರೋಪಿ ಸಹಿತ ಎಸಿಪಿ ಬೆಳ್ಳಿಯಪ್ಪ ತಂಡ ಆಗಮಿಸಿತು. ಮೊದಲನೇ ವಿಮಾನದಲ್ಲಿ ಆರೋಪಿ ಸಹಿತ ಮೂವರು ನಿಲ್ದಾಣಕ್ಕೆ ಬಂದಿಳಿದ್ದಾರೆ. ಇನ್ನುಳಿದ ಮೂವರು ಪೊಲೀಸ್ ಅಧಿಕಾರಿಗಳು ಬೆಂಗಳೂರಿನಿಂದ ಹೊರಡುವ ಮತ್ತೊಂದು ವಿಮಾನದಲ್ಲಿ ಹೊರಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತಂಡದಲ್ಲಿ ಎಸಿಪಿ ವಿನಯ್ ಗಾಂವ್ಕರ್, ಸಿಸಿಬಿ ಪೊಲೀಸ್ ಅಧಿಕಾರಿ ರಾಜೇಂದ್ರ ಪ್ರಸಾದ್, ಬಜ್ಪೆ ಠಾಣಾ ಪಿಎಸ್ಸೈ ಸುರೇಶ್, ಎಎಸ್ಸೈ ಪ್ರಕಾಶ್ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಆರೋಪಿ ಆದಿತ್ಯ ರಾವ್ ಲಾರಿ ಮೂಲಕ ಮಂಗಳೂರಿನಿಂದ ಬೆಂಗಳೂರಿಗೆ ಪರಾರಿಯಾಗಿದ್ದ ಎಂದು ತಿಳಿದುಬಂದಿದೆ. ಬುಧವಾರ ಬೆಳಗ್ಗೆ ಬೆಂಗಳೂರಿನ ಡಿಜಿಪಿ ಮತ್ತು ಐಜಿಪಿ ಕಚೇರಿಯಲ್ಲಿ ಪೊಲೀಸರಿಗೆ ಶರಣಾಗಿದ್ದನು. ಪ್ರಕರಣದ ಆರೋಪಿ ಆದಿತ್ಯ ರಾವ್ನನ್ನು ಬೆಂಗಳೂರಿನಲ್ಲಿ ಬೆಳಗ್ಗೆ ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದರು. ಬಳಿಕ ವೈದ್ಯರಿಂದ ಆರೋಪಿಯ ಆರೋಗ್ಯ ತಪಾಸಣೆ ಮಾಡಲಾಗಿತ್ತು. ಆರೋಪಿ ಸದೃಢ ಇರುವುದಾಗಿ ವೈದ್ಯರು ಘೋಷಿಸಿದ್ದರು. ನಂತರ ಸ್ಥಳೀಯ ಪೊಲೀಸರು ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಬಳಿಕವೇ ನ್ಯಾಯಾಲಯವು ಆರೋಪಿಯನ್ನು ಮಂಗಳೂರಿಗೆ ಕರೆದೊಯ್ಯಲು ಅನುಮತಿ ನೀಡಿತು.
ಬೆಂಗಳೂರಿನಲ್ಲಿ ‘ಸ್ಫೋಟಕ’ ಆರೋಪಿಯ ಬಂಧನ ಸುದ್ದಿ ತಿಳಿ