2 ವರ್ಷಗಳ ಅವಧಿಯಲ್ಲಿ ಹರೇಕಳ ನದಿ ತೀರ-ಅಡ್ಯಾರ್ ನಡುವೆ ಸೇತುವೆ ಕಂ ಬ್ಯಾರೇಜ್: ಯು.ಟಿ.ಖಾದರ್
ಮಂಗಳೂರು, ಜ.22: ಬಹು ನಿರೀಕ್ಷಿತ ಹಾಗೂ ತಮ್ಮ ಕನಸಿನ ಯೋಜನೆಯಾದ ಹರೇಕಳ ನದಿ ತೀರದಿಂದ ಅಡ್ಯಾರ್ಗೆ ಸಂಪರ್ಕಿಸುವ ಸೇತುವೆ ಕಂ ಬ್ಯಾರೇಜ್ 194 ಕೋಟಿ ರೂ. ವೆಚ್ಚದಲ್ಲಿ ಎರಡು ವರ್ಷಗಳ ಅವಧಿಯಲ್ಲಿ ನಿರ್ಮಾಣಗೊಳ್ಳಲಿದೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ಈ ಹಿಂದೆ ಬಜೆಟ್ನಲ್ಲಿ ಇದು ಘೋಷಣೆಯಾಗಿದ್ದು, ಸಣ್ಣ ನೀರಾವರಿ ಇಲಾಖೆಯಿಂದ ಮಾಡಲಾಗುತ್ತಿರುವ ರಾಜ್ಯದ ಪ್ರಥಮ ಅತೀ ದೊಡ್ಡ ಯೋಜನೆ ಇದಾಗಿದೆ ಎಂದವರು ಹೇಳಿದರು.
ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಟೆಂಡರ್ ಆಗಿತ್ತು. ಜಿ. ಶಂಕರ್ ಸಂಸ್ಥೆಗೆ ಈ ಕಾಮಗಾರಿಯ ಟೆಂಡರ್ಗೆ ಅನುಮತಿ ದೊರಕಿದ್ದು, 174 ಕೋಟಿರೂ.ಗಳಿಗೆ ಟೆಂಡರ್ ವಹಿಸಿದ್ದು, 194 ಕೋಟಿ ರೂ.ಗಳ ಟರ್ನ್ ಕೀ ಟೆಂಡರ್ (ಮತ್ತೆ ಹೆಚ್ಚುವರಿ ವೆಚ್ಚವನ್ನು ಕೇಳುವಂತಿಲ್ಲ) ಆಧಾರದಲ್ಲಿ ಕಾಮಗಾರಿಯನ್ನು ಮುಗಿಸಲಿದ್ದಾರೆ. 520 ಮೀಟರ್ ಉದ್ದದ ಸೇತುವೆ ನಿರ್ಮಾಣವಾಗಲಿದ್ದು, 10 ಮೀಟರ್ ಅಗಲವಿರಲಿದೆ. ಏಳೂವರೆ ಮೀಟರ್ನಲ್ಲಿ ಲಘು ವಾಹನ ಸಾಗಾಟಕ್ಕೆ ಅವಕಾಶ ಹಾಗೂ ಎರಡೂವರೆ ಮೀಟರ್ ಇಕ್ಕೆಲ ಗಳಲ್ಲಿ (ತಲಾ 1.25 ಮೀಟರ್ನಂತೆ) ಕಾಲುದಾರಿ ವ್ಯವಸ್ಥೆ ಇರಲಿದೆ. ಕೆಳಗಡೆ ಡ್ಯಾಂ ನಿರ್ಮಾಣವಾಗಲಿದೆ ಎಂದು ಅವರು ವಿವರ ನೀಡಿದರು.
ಪ್ರಸ್ತುತ ಅಡ್ಯಾರ್ ಬಳಿ ಸಮುದ್ರದ ಹಿನ್ನೀರು ತುಂಬೆಗೆ ಹರಿಯುತ್ತಿತ್ತು. ಈ ಡ್ಯಾಂ ಅದನ್ನು ಅದನ್ನು ತಡೆದು ನೀರನ್ನು ಸಂಗ್ರಹಿಸಲಿದೆ. ಅಡ್ಯಾರ್ನಿಂದ ತುಂಬೆವರೆಗೆ ಸುಮಾರು ಮೂರೂವರೆ ಕಿ.ಮೀ. ಉದ್ದದದಲ್ಲಿ ನೀರು ಸಂಗ್ರಹವಾಗಲಿದೆ. 500ರಿಂದ 900 ಮೀಟರ್ ಅಗಲದಲ್ಲಿ ಈ ಡ್ಯಾಂ ನಿರ್ಮಾಣವಾಗಲಿದ್ದು, ಇದರಿಂದ ಅಂತರ್ಜಲ ವೃದ್ಧಿಯಾಗಲಿದೆ. ಉಳ್ಳಾಲಕ್ಕ ಮಾತ್ರವಲ್ಲದೆ, ನಗರದ ಜನರಿಗೆ ತುಂಬೆಯಲ್ಲಿ ನೀರಿನ ಸಮಸ್ಯೆ ಎದುರಾದಗಲೂ ಇಲ್ಲಿಂದ ನೀರು ಪೂರೈಸಬಹುದಾಗಿದೆ. ಈ ಡ್ಯಾಂನಲ್ಲಿ 4 ಮೀಟರ್ ನೀರನ್ನು ನಿಲ್ಲಿಸಬಹುದಾಗಿರುತ್ತದೆ. ಆದರೆ ಅಷ್ಟು ನೀರು ನಿಲ್ಲಿಸಿದರೆ ಸದ್ಯ ಆ ಪ್ರದೇಶದಲ್ಲಿ ಮುಳುಗಡೆಯಾಗಬಹುದಾದ ಹಿನ್ನೆಲೆಯಲ್ಲಿ 2 ಮೀಟರ್ ನೀರು (18.7 ಮಿಲಿಯನ್ ಕ್ಯೂಬಿಕ್ ಮೀಟರ್) ನಿಲುಗಡೆಗೊಳಿಸಲು ಚಿಂತಿಸಲಾಗಿದೆ. ಇದು ಪ್ರವಾಸೋದ್ಯಮ ತಾಣವಾಗಿಯೂ ಗುರುತಿಸಲ್ಪಡಲಿೆ ಎಂದು ಯು.ಟಿ.ಖಾದರ್ ಹೇಳಿದರು.
ಗೋಷ್ಠಿಯಲ್ಲಿ ಸಂತೋಷ್ ಕುಮಾರ್ ಶೆಟ್ಟಿ, ಮುಹಮ್ಮದ್ ಮೋನು, ಮುಸ್ತಫಾ ಮಲಾರ್, ಈಶ್ವರ ಉಳ್ಳಾಲ್, ಆಲ್ವಿನ್ ಡಿಸೋಜಾ, ೋಹಿತ್, ಫಾರೂಕ್ ಉಪಸ್ಥಿತರಿದ್ದರು.