ಅಮರನಾಥ ಶೆಟ್ಟಿ ನಿಧನಕ್ಕೆ ಪಲಿಮಾರುಶ್ರೀ ಸಂತಾಪ
ಉಡುಪಿ, ಜ.27: ಮಾಜಿ ಸಚಿವ ಹಾಗೂ ಜೆಡಿಎಸ್ ನಾಯಕ ಕೆ.ಅಮರನಾಥ ಶೆಟ್ಟಿ ಅವರ ನಿಧನಕ್ಕೆ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.
ಸರಳ ಸಜ್ಜನಿಕೆಯ ವ್ಯಕ್ತಿತ್ವದ ಅಮರನಾಥ ಶೆಟ್ಟಿ ಅವರು ತಮ್ಮ ಗುರುಗಳಾದ ಶ್ರೀವಿದ್ಯಾಮಾನ್ಯ ತೀರ್ಥರ ಪರ್ಯಾಯದ ಅವಧಿಯಲ್ಲಿ ಶ್ರೀಕೃಷ್ಣದೇವರಿಗೆ ನಿರ್ಮಿಸಿದ ಚಿನ್ನದ ರಥಕ್ಕೆ ಸಾಗುವಾನಿ ಮರಗಳನ್ನು ಒದಗಿಸಿದ್ದು, ಅವರು ಮಠದ ಅಭಿಮಾನಿ ಗಳಾಗಿದ್ದರು. ಅವರ ನಿಧನ ಅತೀವ ದು:ಖವನ್ನುಂಟುಮಾಡಿದ್ದು, ಅವರ ಕುಟುಂಬಕ್ಕೆ ದು:ಖ ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಹಾರೈಸಿದ್ದಾರೆ.
ಮಟ್ಟಾರು ಸಂತಾಪ: ಮಾಜಿ ಸಚಿವ, ಜೆಡಿಎಸ್ ನಾಯಕ ಕೆ.ಅಮರನಾಥ ಶೆಟ್ಟಿ ಅವರ ನಿಧನಕ್ಕೆ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಸಂತಾಪ ವ್ಯಕ್ತಪಡಿಸಿದ್ದಾರೆ. ಜೆ.ಎಚ್.ಪಟೇಲ್ರ ಸಂಪುಟದಲ್ಲಿ ಸಚಿವರಾಗಿ ಅಮರನಾಥ ಶೆಟ್ಟಿ ಅವರು ಅತ್ಯುತ್ತಮ ಕೆಲಸ ಮಾಡಿ ಜನಪ್ರಿಯರಾಗಿದ್ದರು ಎಂದು ಹೇಳಿದ್ದಾರೆ.
ಯೋಗೇಶ್ ಶೆಟ್ಟಿ ಸಂತಾಪ: ಸರಳ ವ್ಯಕ್ತಿತ್ವದ ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಅವರ ನಿಧನಕ್ಕೆ ಉಡುಪಿ ಜಿಲ್ಲಾ ಜಾತ್ಯತೀತ ಜನತಾ ದಳದ ಜಿಲ್ಲಾಧ್ಯಕ್ಷ ಯೋಗೀಶ್ ವಿ.ಶೆಟ್ಟಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.