ಪುತ್ತೂರು ದಿನಬಳಕೆ ಸಾಮಗ್ರಿಗಳ ಬೆಲೆಯೇರಿಕೆ ವಿರೋಧಿಸಿ ಎಸ್ಡಿಎಸಿಯು ಪ್ರತಿಭಟನೆ
ಪುತ್ತೂರು, ಫೆ.4: ಇಂಧನ ಅನಿಲ ಸೇರಿದಂತೆ ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ವಿರೋಧಿಸಿ ಸೋಶಿಯಲ್ ಡೆಮಾಕ್ರಟಿಕ್ ಆಟೋ ಚಾಲಕರ ಯೂನಿಯನ್(ಎಸ್ಡಿಎಸಿಯು) ವತಿಯಿಂದ ಮಂಗಳವಾರ ಪುತ್ತೂರು ಬಸ್ ನಿಲ್ದಾಣದ ಸಮೀಪದ ಗಾಂಧಿಕಟ್ಟೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಎಸ್ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ, ಕೇಂದ್ರದಲ್ಲಿ ನಾಲಾಯಕ್ ಸರಕಾರವು ಆಡಳಿತ ನಡೆಸುತ್ತಿದ್ದು, ಈ ಸರಕಾರವು ಬಂಡವಾಳಶಾಹಿಗಳನ್ನು ಬೆಳೆಸಲು ಬಡವರಿಗೆ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದೆ. ಕೇಂದ್ರದ ಈ ನೀತಿಯು ಖಂಡನೀಯ ಎಂದರು.
ಕೇಂದ್ರ ಸರ್ಕಾರವು ಬಂಡವಾಳ ಶಾಹಿಗಳ ಹಿಡಿತದಲ್ಲಿದೆ ಎಂಬುದಕ್ಕೆ ಈ ಬಾರಿಯ ಕೇಂದ್ರ ಬಜೆಟ್ ಸ್ಪಷ್ಟ ಉದಾಹರಣೆಯಾಗಿದೆ. ದೇಶವನ್ನೇ ಬಂಡವಾಳ ಶಾಹಿಗಳಿಗೆ ಮಾರಾಟ ಮಾಡುವ ಹುನ್ನಾರ ನಡೆಸುತ್ತಿರುವ ಸರಕಾರವು ದೇಶವನ್ನು ದಿವಾಳಿ ಮಾಡುವ ಪರಿಸ್ಥಿತಿಯನ್ನು ನಿರ್ಮಿಸುತ್ತಿದೆ. ಇಲ್ಲಿ ಆಟೋ ಚಾಲಕರು ಸೇರಿದಂತೆ ಬಡವರು ಜೀವನ ನಿರ್ವಹಣೆ ನಡೆಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕೇಂದ್ರ ಸರಕಾರ ಅಧಿಕಾರ ಪಡೆದುಕೊಂಡ ಬಳಿಕ ನಿರಂತರ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದರು.
ಎಸ್ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಕೆ.ಎ.ಸಿದ್ದೀಕ್ ಮಾತನಾಡಿ, ಸರಕಾರವು ರೈತರ ಸಾಲ ಮತ್ತು ಬಡ್ಡಿ ಮನ್ನಾ ಮಾಡಿದ ಮಾದರಿಯಲ್ಲಿ ಆಟೊ ರಿಕ್ಷಾ ಚಾಲಕರ ಬದುಕಿಗೂ ಕಾಯಕಲ್ಪನೀಡುವ ಕೆಲಸ ಮಾಡಬೇಕು. ರಿಕ್ಷಾಕ್ಕೆ ಬಳಸಲಾಗುವ ಗ್ಯಾಸ್, ಇನ್ಸೂರೆನ್ಸ್ ವೌಲ್ಯಗಳನ್ನು ಕಡಿಮೆಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಸ್ಡಿಎಸಿಯು ಅಧ್ಯಕ್ಷ ಸಮೀರ್ ನಾಜೂಕ್ ಕೂರ್ನಡ್ಕ, ಎಸ್ಡಿಟಿಯು ಅಧ್ಯಕ್ಷ ಶಾಕಿರ್ ಅಳಕೆಮಜಲು, ಮುಖಂಡರಾದ ಇಬ್ರಾಹೀಂ ಹಾಜಿ ಸಾಗರ್, ಆಶಿಕ್ ಮುಕ್ವೆ, ಸುಲೈಮಾನ್ ಉರಿಮಜಲು, ಅಲಿ ನಾಜೂಕ್, ಹಮೀದ್ ಕೆಐಸಿ, ಬಶೀರ್ ಬಡಕ್ಕೋಡಿ, ಬಾತಿಶ್ ಬಡಕ್ಕೋಡಿ, ಫಾರೂಕ್ ಕಬಕ, ಯಹ್ಯಾ ಮತ್ತಿತರರು ಉಪಸ್ಥಿತರಿದ್ದರು.
ಪ್ರತಿಭಟನೆಯ ಬಳಿಕ ಸಹಾಯಕ ಆಯುಕ್ತರಿಗೆ ಆಟೊ ರಿಕ್ಷಾ ಚಾಲಕರ ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸಲಾಯಿತು.