ಮುಖ್ಯಮಂತ್ರಿಯಾಗಿದ್ದ ವೇಳೆ ಕುಮಾರಸ್ವಾಮಿಯಿಂದ ರಾಜ್ಯ ಖಜಾನೆ ಲೂಟಿ: ಬಿ.ಜೆ.ಪುಟ್ಟಸ್ವಾಮಿ ಆರೋಪ
ಮಂಗಳೂರು, ಫೆ.10: ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಹಣಕಾಸು ಇಲಾಖೆಯ ಅನುಮೋದನೆ ಇಲ್ಲದೆ ಹಲವು ಲೋಕೋಪಯೋಗಿ ಕಾಮಗಾರಿಗಳಿಗೆ ಅನುಮತಿ ನೀಡಿ ರಾಜ್ಯದ ಖಜಾನೆ ಲೂಟಿ ಮಾಡಿದ್ದಾರೆ ಎಂದು ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಆರೋಪಿಸಿದ್ದಾರೆ.
ಕರಾವಳಿ ಆರ್ಥಿಕ ಅಭಿವೃದ್ಧಿ ಯೋಜನೆಯ ಕುರಿತಾದ ಕಾರ್ಯಾಗಾರವನ್ನು ಉದ್ಘಾಟಿಸಿದ ಬಳಿಕ ನಗರದಲ್ಲಿಂದು ಸುದ್ದಿಗಾರರನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಆಗಿರುವ ಆರ್ಥಿಕ ಅಶಿಸ್ತು ರಾಜ್ಯದಲ್ಲಿ ಆರ್ಥಿಕ ಅಸಮರ್ಪಕ ನಿರ್ವಹಣೆಗೆ ಕಾರಣವಾಗಿದೆ. ಸುಮಾರು 55 ಸಾವಿರ ಕೋಟಿ ರೂ. ಯೋಜನೆ ಗಳಿಗೆ ಸರಕಾರದ ಆರ್ಥಿಕ ಇಲಾಖೆಯ ಅನುಮೋದನೆ ನೀಡದೆ ಮಂಜೂರು ಮಾಡಿದ್ದಾರೆ.ಇದಕ್ಕೆ ಸಚಿವರಾಗಿದ್ದ ರೇವಣ್ಣ ಕೂಡಾ ಕಾರಣರಾಗಿದ್ದಾರೆ. ಈಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ಸರಿದಾರಿಗೆ ತರುತ್ತಿದ್ದಾರೆ ಎಂದು ಪುಟ್ಟಸ್ವಾಮಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಪ್ರವಾದೋದ್ಯಮ ಅಭಿವೃದ್ಧಿಗೆ ಮತ್ತು ಕೌಶಲ್ಯ ಅಭಿವೃದ್ಧಿ ತರಬೇತಿಗೆ ಈ ಬಾರಿಯ ಬಜೆಟ್ನಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿಗೆ ಪ್ರಸ್ತಾವ ಸಲ್ಲಿಸಲಾಗುವುದು.ತದಡಿ, ಬೇಲಿ ಕೇರಿ, ಕಾರವಾರ ಬಂದರುಗಳಿಗೆ ಎಲ್ಲಾ ಮಾರ್ಗಗಳ ಮೂಲಕ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಈ ಬಾರಿಯ ಮುಂಗಡ ಪತ್ರದಲ್ಲಿ ಹಣ ನಿಗದಿಪಡಿಸಲು ಮುಖ್ಯಮಂತ್ರಿ ಜೊತೆಗೆ ಚರ್ಚಿಸಲಾಗುವುದು ಎಂದು ಅವರು ಹೇಳಿದರು.