ಜೆಪ್ಪುಸಂತ ಆಂತೋನಿ ಆಶ್ರಮ ವತಿಯಿಂದ ಸಂತ ಆಂತೋನಿಯ ಪುಣ್ಯ ಸ್ಮರಣಿಕೆಗಳ ಮಹೋತ್ಸವ
ಮಂಗಳೂರು, ಫೆ.15: ಮಂಗಳೂರು ಧರ್ಮಪ್ರಾಂತದ ನಿವೃತ್ತ ಧರ್ಮಾಧ್ಯಕ್ಷ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಶನಿವಾರ ಮಿಲಾಗ್ರಿಸ್ ದೇವಾಲಯದ ತೆರೆದ ಮೈದಾನದಲ್ಲಿ ಜೆಪ್ಪು ಸಂತ ಆಂತೋನಿಯ ಪುಣ್ಯ ಸ್ಮರಣಿಕೆಗಳ ಗೌರಾವಾರ್ಥ ಹಬ್ಬದ ಬಲಿಪೂಜೆ ಅರ್ಪಿಸಿದರು.
ಬಳಿಕ ಮಾತನಾಡಿದ ಅವರು ಸಂತ ಆಂತೋನಿಯವರು ಅಲ್ಪ ಆಯುಷ್ಯದ ಜೀವನದಲ್ಲಿ ಹಸಿವು ದಣಿವು ಎನ್ನದೆ ಸುವಾರ್ತೆ ಸಾರಿ ಜನರ ಜೀವನದಲ್ಲಿ ಸಂತೋಷ ತುಂಬಿದರು. ಅದೇ ರೀತಿ ನಾವೂ ಕೂಡ ನಮ್ಮ ಜೀವನ ಇತರರ ಜೀವನಕ್ಕೆ ಬೆಳಕು ನೀಡುವಂತಾಗಲಿ ಎಂದು ಹಾರೈಸಿದರು.
ಪುತ್ತೂರು ಫಿಲೊಮಿನ ಕಾಲೇಜಿನ ಕ್ಯಾಂಪಸ್ ಡೈರೆಕ್ಟರ್ ವಂ.ಡಾ.ಪ್ರಕಾಶ್ ಮೊಂತೆರೊ ಬಲಿಪೂಜೆಯ ಸಮಯದಲ್ಲಿ ಪ್ರವನ ನೀಡಿದರು.
ಹಬ್ಬದ ಪ್ರಯುಕ್ತ ಬೆಳಗ್ಗೆ ಆಶ್ರಮದ ನಿವಾಸಿಗಳಿಗೆ ಬಲಿಪೂಜೆ, ಬಳಿಕ ಮಿಲಾಗ್ರಿಸ್ ದೇವಾಲಯದಲ್ಲಿ ಸಂತ ಜೋಸೆಫ್ ಗುರುಮಠದ ಪ್ರಾಧ್ಯಾಪಕ ಫಾ.ಬೊನಿಫಾಸ್ ಪಿಂಟೊ, ಆಶ್ರಮದಲ್ಲಿ ಸಾಸ್ತಾನ ಸಂತ ಆಂತೋನಿ ದೇವಾಲಯದ ಧರ್ಮಗುರು ಫಾ.ವಾಲ್ಟರ್ ಮೆಂಡೊನ್ಸಾ ಮತ್ತು ಸಂಜೆ ಜೆಪ್ಪು ಸಂತ ಜೋಸೆಫ್ ಗುರುಮಠದ ಪ್ರಾಧ್ಯಾಪಕ ಫಾ.ಅಲೆಕ್ಸಾಂಡರ್ ಬಲಿಪೂಜೆಯನ್ನು ಅರ್ಪಿಸಿದರು.
ಸಂಸ್ಥೆಯ ನಿರ್ದೇಶಕ ಫಾ.ಒನಿಲ್ ಡಿಸೋಜ, ಸಹಾಯಕ ನಿರ್ದೇಶಕ ಫಾ. ತೃಶಾನ್ ಡಿಸೋಜ, ಫಾ.ರೋಶನ್ ಡಿಸೋಜ ಉಪಸ್ಥಿತರಿದ್ದರು.