‘ಪ್ರತಿ ಪೊಲೀಸ್ ಠಾಣೆಯಲ್ಲೂ ಮಗುಸ್ನೇಹಿ ಪೊಲೀಸ್ ಸಿಬ್ಬಂದಿ’
ಶಿರ್ವ, ಫೆ.16: ಶಿರ್ವ ಪೊಲೀಸ್ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರಮದ ಪ್ರಯುಕ್ತ ಇತ್ತೀಚೆಗೆ ಶಿರ್ವ ಹಿಂದು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ಜರಗಿತು. ಸಂವಾದದಲ್ಲಿ ಶಿರ್ವ ಠಾಣೆಯ ಉಪನಿರೀಕ್ಷಕ ಅಬ್ದುಲ್ ಖಾದರ್ ಮಾತನಾಡಿ, ಪೊಲೀಸ್ ಠಾಣೆಗೆ ಬರಲು ಯಾವುದೇ ಅಂಜಿಕೆ ಮತ್ತು ಭಯ ಪಡದೆ ತಮಗಾಗುತ್ತಿರುವ ಅನ್ಯಾಯವನ್ನು ಸಂಬಂಧಪಟ್ಟ ಠಾಣಾಧಿಕಾರಿಯವರಿಗೆ ಲಿಖಿತವಾಗಿ ನೀಡಬೇಕು. ವಿದ್ಯಾರ್ಥಿಗಳು ಪೊಲೀಸ್ ಇಲಾಖೆಗೆ ಸಂಬಂಧಪಟ್ಟ ಮಾಹಿತಿಯನ್ನು ಪಡೆದುಕೊಂಡು, ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿದಾಗ ಸಮಾಜವನ್ನು ಅಪರಾಧಮುಕ್ತ ಸಮಾಜವನ್ನಾಗಿ ಮಾಡಲು ಸಾಧ್ಯವಾಗುತ್ತದೆ ಎಂದರು.
ಪ್ರತಿ ಪೊಲೀಸ್ ಠಾಣೆಯಲ್ಲೂ ಓರ್ವ ಮಗು ಸ್ನೇಹಿ ಪೊಲೀಸ್ ಇರುತ್ತಾರೆ. ಇವರು ಮಕ್ಕಳಿಗೆ ಸಂಬಂಧಪಟ್ಟ ಯಾವೂದೇ ಅಹವಾಲು ಸ್ವೀಕರಿಸಿ ಮಕ್ಕಳಿಗೆ ನ್ಯಾಯ ದೊರಕಿಸುವ ಕೆಲಸ ಮಾಡುತ್ತಾರೆ. ಇವರು ಮಕ್ಕಳೊಡನೆ ಇರುವಾಗ ಸಮವಸ್ತ್ರ ಧರಿಸದೆ ಸಾದ ಡ್ರೆಸ್ನಲ್ಲಿ ಇರುತ್ತಾರೆ. ಏಕೆಂದರೆ ಮಕ್ಕಳಿಗೆ ಹೆದರಿಕೆ ಯಾಗಬಾರದು ಎಂಬ ಕಾರಣಕ್ಕಾಗಿ. ಇವರು ಮಕ್ಕಳ ಕಲ್ಯಾಣ ಸಮಿತಿ ಯೊಂದಿಗೂ ನಿಕಟ ಸಂಪರ್ಕದಲ್ಲಿ ಇರುತ್ತದೆ. ಮಕ್ಕಳ ಸಹಾಯವಾಣಿಗೆ ಬಂದ ದೂರನ್ನು ತಕ್ಷಣ ಸ್ವೀಕರಿಸಿ ಮಕ್ಕಳಿಗೆ ರಕ್ಷಣೆ ಕೊಡುವ ಕೆಲಸ ಮಾಡಲಾುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದ ಸದಸ್ಯ ವಾಸು ಆಚಾರ್, ತಾಲೂಕು ಕೇಂದ್ರದ ಕಾರ್ಯದರ್ಶಿ ಬಾಲಕೃಷ್ಣ ಪೂಜಾರಿ, ಜಿಲ್ಲಾ ಕೇಂದ್ರದ ಕೋಶಾಧಿಕಾರಿ ಸೀಮಾ, ಹಿಂದು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶಾಲಿನಿ, ನಿವೃತ್ತ ಮುಖ್ಯಶಿಕ್ಷಕ ಎನ್.ಪ್ರಭಾಕರ್, ಹಳೆ ವಿದ್ಯಾರ್ಥಿ ಸಂಘದ ಸದಸ್ಯ ಪವನ್, ಮಂಗಳೂರು ಪಡಿ ಸಂಸ್ಥೆಯ ಜಿಲ್ಲಾ ಸಂಯೋಜಕ ವಿವೇಕ ಮೊದಲಾದವರು ಉಪಸ್ಥಿತರಿದ್ದರು.