'ಪಡಿತರ ಚೀಟಿ ಪಡೆಯಲು ತಾಂತ್ರಿಕ ಸಮಸ್ಯೆ ಪರಿಹರಿಸಿ'
ಉಡುಪಿ, ಫೆ.18: ಕಳೆದ ಒಂದು ತಿಂಗಳಿಂದ ರಾಜ್ಯದಾದ್ಯಂತ ಅಂತರ್ಜಾಲ ಸಮಸ್ಯೆಯಿಂದ ಜನರು ಪಡಿತರ ಚೀಟಿ ಪಡೆಯಲು, ಹೊಸ ಆಧಾರ್ ಕಾರ್ಡ್ ಪಡೆಯಲು, ಸರಕಾರಿ ಕೆಲಸಗಳನ್ನು ಮಾಡಲು ಆಗದೆ ತೊಂದರೆಗೆ ಒಳಗಾಗಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕಕುಮಾರ್ ಕೊಡವೂರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಲ್ಲದೇ ಇದೇ ಫೆ.15ರಿಂದ ಸತತ ನಾಲ್ಕು ದಿನ ಸರ್ವರ್ ಇಲ್ಲದೆ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸೋಮವಾರ ಫೆ.17ರಂದು ಇಡೀ ರಾಜ್ಯದಲ್ಲಿ ಸರ್ವರ್ ತೊಂದರೆಯಿಂದ ಭೂಮಿಯ ನೊಂದಣೆ ಕಾರ್ಯ ನಡೆಯದೆ ಸರಕಾರಕ್ಕೆ ಬರುವ ಕಂದಾಯದ ಕೋಟ್ಯಾಂತರ ರೂಪಾಯಿ ಆದಾಯ ನಷ್ಟವಾಗಿದೆ. ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯ ಸರಕಾರಕ್ಕೆ ಇದೊಂದು ಮಾರಕ ಹೊಡೆತ ಎಂದು ಅವರು ಹೇಳಿದ್ದಾರೆ.
ಇದಕ್ಕೆ ಏನು ಕಾರಣ ಎಂದು ರಾಜ್ಯದ ಮಾಹಿತಿ ತಂತ್ರಜ್ಞಾನ ಸಚಿವರು ಕೂಡಲೇ ಪತ್ರಿಕಾ ಹೇಳಿಕೆ ಕೊಟ್ಟು ತಾಂತ್ರಿಕ ಸಮಸ್ಯೆಯನ್ನು ತಕ್ಷಣ ಸರಿಪಡಿಸಲು ಸರ್ವ ಪ್ರಯತ್ನ ಮಾಡಬೇಕು. ಇಲ್ಲದಿದ್ದಲ್ಲಿ ತಾಲೂಕು ಕಛೇರಿ ಮುಂದೆ ನಾಗರಿಕರೊಂದಿಗೆ ಧರಣಿ ಮಾಡುವುದು ಖಂಡಿತ ಎಂದು ಅಶೋಕ್ ಕುಮಾರ್ ಕೊಡವೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.