ಫೆ.21: ‘ಕಡಲ’ ಜಾನಪದ ವಿಚಾರಗೋಷ್ಠಿ
ಮಂಗಳೂರು, ಫೆ.18: ತುಳು ಪರಿಷತ್ ವತಿಯಿಂದ ಪ್ರಥಮ ಬಾರಿಗೆ ‘ಕಡಲ ಜಾನಪದ ವಿಚಾರ ಗೋಷ್ಠಿಯು ಫೆ. 21 ರಂದು ನಗರದ ಕಡಲಲ್ಲಿ ನಡೆಯಲಿದೆ. ಹೊಸದಾಗಿ ಆರಂಭಗೊಂಡಿರುವ ರಾಣಿ ಅಬ್ಬಕ್ಕ ವಿಹಾರ ನೌಕೆಯಲ್ಲಿ ಈ ವಿಚಾರಗೋಷ್ಠಿ ನಡೆಯಲಿದೆ.
ಅಂದು ಬೆಳಗ್ಗೆ 10ಕ್ಕೆ ಕರಾವಳಿ ಕಾಲೇಜು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗಣೇಶ್ ರಾವ್ ವಿಚಾರಗೋಷ್ಠಿ ಉದ್ಘಾಟಿಸಲಿದ್ದಾರೆ. ಮಂಗಳೂರು ವಿವಿ ರಿಜಿಸ್ಟ್ರಾರ್ ಪ್ರೊ.ಎ.ಎಂ.ಖಾನ್ ಅಧ್ಯಕ್ಷತೆ ವಹಿಸಲಿದ್ದಾರೆ. ಎಸ್ಡಿಸಿಸಿ ಬ್ಯಾಂಕ್ನ ಸಿಇಒ ಬಿ.ರವೀಂದ್ರ ಹಾಗೂ ವಿವಿ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ.ರಾಮಕೃಷ್ಣ ಬಿ.ಎಂ ಅತಿಥಿಯಾಗಿ ಭಾಗವಹಿಸುವರು.
ಮೊದಲ ಗೋಷ್ಠಿಯಲ್ಲಿ ಡಾ.ಕೆ.ಎಂ. ರಾಘವ ನಂಬಿಯಾರ್ ‘ಪಡವುದಪ್ಪೆನ ಪಾರ್ದನ’ ಬಗ್ಗೆ ಮಾತನಾಡಲಿದ್ದಾರೆ. ಕಡಲಿಗೆ ಹೋಗಿ ವ್ಯವಹಾರ ಮಾಡುವವರ ಬದುಕಿನ ಚಿತ್ರಣ ನೀಡುವ ಹಾಗೂ ‘ಪಡವುದ ಅಪ್ಪೆ’ಎಂದು ಜನಮಾನ್ಯ ಪಡೆದ ದೈವದ ಪಾರ್ದನದದ ಬಗ್ಗೆ ನಂಬಿಯಾರ್ ‘ಪಡವುದಪ್ಪೆನ ಪಾರ್ದನ’ ಎಂಬ ಕೃತಿಯನ್ನು ಮಲಯಾಳಂನಿಂದ ತುಳುವಿಗೆ ಅನುವಾದಿಸಿದ್ದು, ಆ ಹಿನ್ನೆಲೆಯಲ್ಲಿ ವಿಚಾರ ಮಂಡಿಸಲಿದ್ದಾರೆ.
ಎರಡನೇ ಗೋಷ್ಠಿಯಲ್ಲಿ ಎಂಆರ್ಪಿಎಲ್ ಸಂಸ್ಥೆಯ ಕಾರ್ಪೊರೇಟ್ ಕಮ್ಯೂನಿಕೇಶನ್ ವಿಭಾಗದ ಜನರಲ್ ಮ್ಯಾನೇಜರ್ ರುಡಾಲ್ಫ್ ನೊರೋನ್ಹಾ ‘ಹಳೆ ಕಾಲದ ಕಡಲ ಬದುಕಿನ ತಂತ್ರಜ್ಞಾನ’ ಎಂಬ ವಿಚಾರದ ಬಗ್ಗೆ ಮಾತನಾಡಲಿದ್ದಾರೆ. ಲೇಖಕಿ ಡಾ.ಮೀನಾಕ್ಷಿ ರಾಮಚಂದ್ರ ಅಧ್ಯಕ್ಷತೆ ವಹಿಸಲಿದ್ದು, ಡಾ.ವಾಸುದೇವ ಬೆಳ್ಳೆ ಗೋಷ್ಠಿಯನ್ನು ನಿರ್ವಹಿಸಲಿದ್ದಾರೆ ಎಂದು ತುಳು ಪರಿಷತ್ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.