ಉಡುಪಿ: 23ಕ್ಕೆ ಪುರಭವನದಲ್ಲಿ ‘ಸಪ್ತಪದಿ’ ವಿಚಾರ ಸಂಕಿರಣ
ಉಡುಪಿ, ಫೆ.19: ಕರ್ನಾಟಕ ರಾಜ್ಯ ಮುಜರಾಯಿ, ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ಮುಂದಿನ ಎಪ್ರಿಲ್ 26 ಹಾಗೂ ಮೇ 25ರಂದು ನಡೆಯಲಿರುವ ‘ಸಪ್ತಪದಿ’ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದ ಪೂರ್ವಭಾವಿಯಾಗಿ ಫೆ.23ರ ಅಪರಾಹ್ನ 3 ಗಂಟೆಗೆ ನಗರದ ಅಜ್ಜರಕಾಡಿನಲ್ಲಿರುವ ಪುರಭವನದಲ್ಲಿ ವಿಚಾರ ಸಂಕಿರಣವೊಂದು ನಡೆಯಲಿದೆ.
ಕಾರ್ಯಕ್ರಮವನ್ನು ರಾಜ್ಯ ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ. ಉಡುಪಿ-ಚಿಕ್ಕಮಗಳೂರು ಜಿಲ್ಲೆಯ ಸಂಸದೆ ಶೋಭಾ ಕರಾಂದ್ಲಾಜೆ ಶುಭಾಶಂಸನೆ ಮಾಡಲಿದ್ದಾರೆ.
ಸಪ್ತ ಪದಿ- ಸರಳ ಸಾಮೂಹಿಕ ವಿವಾಹದ ಕುರಿತು ರಾಜ್ಯದ ಖ್ಯಾತ ಧಾರ್ಮಿಕ ಚಿಂತಕರು ಹಾಗೂ ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯರಾದ ಡಾ. ಮಹರ್ಷಿ ಆನಂದ ಗುರೂಜಿ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಶಾಸಕರು, ಜಿಪಂ ಅಧ್ಯಕ್ಷರು, ಗ್ರಾಪಂ ಅಧ್ಯಕ್ಷರು ಮತ್ತು ಜನಪ್ರತಿನಿಧಿಗಳು ಹಾಗೂ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಸಚಿವರ ಕಚೇರಿ ಪ್ರಕಟಣೆ ತಿಳಿಸಿದೆ.