ಫೆ.21ರಿಂದ ಮುಡಿಪುವಿನಲ್ಲಿ ಕರಾವಳಿ ಕಲೋತ್ಸವ- 2020
ಕೊಣಾಜೆ : ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ವತಿಯಿಂದ 'ಕರಾವಳಿ ಕಲೋತ್ಸವ-2020' ಫೆ.21ರಿಂದ ಮಾರ್ಚ್ 6ರವರೆಗೆ ಮುಡಿಪು ಜಂಕ್ಷನ್ ಬಳಿಯಿರುವ ಬಾಳೆಪುಣಿ ಪಂಚಾಯಿತಿ ಮೈದಾನದಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಸುದರ್ಶನ್ ಜೈನ್ ಹೇಳಿದರು.
2006ರಲ್ಲಿ ಬಂಟ್ವಾಳದಲ್ಲಿ ಆರಂಭಗೊಂಡಿರುವ 'ಚಿಣ್ಣರ ಲೋಕ' ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ರಾಜ್ಯಾದ್ಯಂತ 43 ಶಾಖೆಗಳನ್ನು ಹೊಂದಿದ್ದು, ಕಳೆದ 15 ವರ್ಷಗಳಲ್ಲಿ 5228 ಮಕ್ಕಳು ಯಕ್ಷಗಾನ, ಸಂಗೀತ, ಜಾನಪದ ನೃತ್ಯ, ಚೆಂಡೆ, ನಾಟಕ ಕಲೆ ಸಹಿತ ಸಾಂಸ್ಕೃತಿಕ ಚಟುವಟಿಕೆಗಳನ್ನು 31 ಅನುಭವಿ ತರಬೇತುದಾರರಿಂದ ತರಬೇತಿ ಪಡೆದು ಪ್ರದರ್ಶನ ನೀಡುತ್ತಿದ್ದಾರೆ ಎಂದು ಗುರುವಾರ ಮುಡಿಪುವಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮೂಡಬೇಕು. ಇದಕ್ಕೆ ಕಲೆಯೇ ಪ್ರೇರಣೆಯಾಗಬೇಕು ಎನ್ನುವ ನಿಟ್ಟಿನಲ್ಲಿ ಸಂಸ್ಥೆ ನಡೆಸಲಾಗುತ್ತಿದೆ. ಮುಡಿಪುವಿನಲ್ಲಿ ನಡೆಯಲಿರುವ ಕರಾವಳಿ ಕಲೋತ್ಸವದಲ್ಲಿ ಸಂಸ್ಥೆಯಡಿ ತರಬೇತಿ ಪಡೆದಿರುವ ಹೆಚ್ಚಿನ ಕಲಾವಿದರು ಭಾಗವಹಿಸಲಿದ್ದಾರೆ. ಡ್ಯಾನ್ಸ್ ಕರಾವಳಿ, ನೃತ್ಯ ಸಂಭ್ರಮ, ನೃತ್ಯ ಸಿಂಚನ, ನೃತ್ಯ ವೈಭವ, ಸಾಂಸ್ಕೃತಿಕ ವೈಭವ, ಕರಾವಳಿ ದಫ್ ಸ್ಪರ್ಧೆ, ಶ್ರೀ ಕೃಷ್ಣ ಲೀಲೆ, ಕಂಸವಧೆ ಯಕ್ಷಗಾನ, ಪಂಡ ಕೇನುಜರ್ ನಾಟಕ ಪ್ರದರ್ಶನಗೊಳ್ಳಲಿದೆ.
ಶನಿವಾರ ಸಂಜೆ 6 ಗಂಟೆಗೆ ಶಾಸಕ ಯು.ಟಿ.ಖಾದರ್ ಅವರು ಎ.ಪಿ.ಜೆ.ಅಬ್ದುಲ್ ಕಲಾಂ ವೇದಿಕೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಗಟ್ಟಿ, ಎಸಿಪಿ ಕೋದಂಡ ರಾಮ, ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಮುಡಿಪು ಚರ್ಚ್ ಧರ್ಮಗುರು ಫಾ.ಬೆಂಜಮಿನ್ ಪಿಂಟೋ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸಂತೋಷ್ ಕುಮಾರ್ ರೈ, ಟಿ.ಜಿ.ರಾಜಾರಾಮ ಭಟ್, ಹೈದರ್ ಕೈರಂಗಳ ಸಹಿತ ಜನಪ್ರತಿನಿಧಿಗಳು ರಾಜಕೀಯ, ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮೋಹನ್ ದಾಸ್ ಕೊಟ್ಟಾರಿ ಮುನ್ನೂರು, ಕಾಂತಾಡಿಗುತ್ತು ಸೀತಾರಾಮ ಶೆಟ್ಟಿ, ದಯಾನಂದ ಪೆರಾಜೆ, ಮಹಮ್ಮದ್ ನಂದಾವರ ಉಪಸ್ಥಿತರಿದ್ದರು.