ಫೆ. 25: ಮೈಕ್ರೋ ಫೈನಾನ್ಸ್ ಸಾಲ ಸಂತ್ರಸ್ತ ಮಹಿಳೆಯರಿಂದ ವಿಧಾನಸೌಧ ಚಲೋ
ಪುತ್ತೂರು, ಫೆ. 21: ರಾಜ್ಯದ ಸಾಲ ಸಂತ್ರಸ್ತ ಮಹಿಳೆಯರ ಬೃಹತ್ ಪ್ರತಿಭಟನೆ ಫೆ. 25 ರಂದು ಬೆಳಗ್ಗೆ ಬೆಂಗಳೂರು ಫ್ರೀಡಂ ಪಾರ್ಕ್ ಮೈದಾನದಲ್ಲಿ ನಡೆಯಲಿದ್ದು, ವಿವಿಧ ಜಿಲ್ಲೆಗಳ ಸಾವಿರಾರು ಮಹಿಳೆಯರು ಪಾಲ್ಗೊಳ್ಳಲಿದ್ದಾರೆ ಎಂದು ಕರ್ನಾಟಕ ರಾಜ್ಯ ಋಣಮುಕ್ತ ಹೋರಾಟ ಸಮಿತಿ ಅಧ್ಯಕ್ಷ ನ್ಯಾಯವಾದಿ ಬಿ.ಎಂ. ಭಟ್ ತಿಳಿಸಿದ್ದಾರೆ.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮೈಕ್ರೋ ಫೈನಾನ್ಸ್ಗಳಲ್ಲಿನ ಮಹಿಳೆಯರ ಸಾಲ ಮನ್ನಾ ಮಾಡಲು ಆಗ್ರಹಿಸಿ ಹಾಗೂ ಮೈಕ್ರೋ ಫೈನಾನ್ಸ್ಗಳ ಅವ್ಯವಹಾರ ಮತ್ತು ದೌರ್ಜನ್ಯದ ವಿರುದ್ಧ, ಫೈನಾನ್ಸ್ಗಳ ಕಾನೂನು ಉಲ್ಲಂಘಿಸಿದ ವ್ಯವಹಾರಗಳನ್ನು ಸ್ತಂಭನ (ಮೊಟೋರಿಯಂ)ಗೊಳಿಸಲು ಮತ್ತು ಮುಟ್ಟುಗೋಲು ಹಾಕಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಈ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.
ಸರಕಾರದ ಜನವಿರೋಧಿ, ಕಾರ್ಮಿಕ ವಿರೋ„ ಧೋರಣೆಗಳೇ ಇಂದು ಬಡ ಮಹಿಳೆಯರು ಸಾಲದ ಕೂಪಕ್ಕೆ ಬೀಳಲು ಕಾರಣವಾಗಿದೆ. ಬಡ ಕಾರ್ಮಿಕರಿಗೆ ತಕ್ಕ ಕೂಲಿ, ರೈತರ ಬೆಳೆಗೆ ಯೋಗ್ಯ ಬೆಲೆ ನೀಡದೆ, ದಿನೋಪಯೋಗಿ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರನ್ನು ದುಸ್ತಿತಿಗೆ ದೂಡಿರುವುದು ಸರಕಾರ. ಈ ಕಾರಣದಿಂದ ಸರಕಾರವೇ ಇಂತಹ ಸಮಸ್ಯೆಗಳಿಗೆ ಹೊಣೆಯಾಗಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಋಣಮುಕ್ತ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಮಂಜುನಾಥ್, ತಾಲೂಕು ಘಟಕದ ಅಧ್ಯಕ್ಷ ಕೇಶವ ಗೌಡ, ಜಿಲ್ಲಾ ಸಹ ಕಾರ್ಯದರ್ಶಿ ಗಣೇಶ್ ಪ್ರಸಾದ್ ಉಪಸ್ಥಿತರಿದ್ದರು.