ಕಲ್ಲಾಪು ರಿಕ್ಷಾ ಚಾಲಕರ ಮೇಲೆ ಹಲ್ಲೆ : ಎಸ್ಡಿಟಿಯು ಖಂಡನೆ
ಮಂಗಳೂರು : ಕಲ್ಲಾಪು ರಿಕ್ಷಾ ಚಾಲಕ ಮತ್ತು ಸಾಮಾಜಿಕ ಕಾರ್ಯಕರ್ತರ ಮೇಲಿನ ಹಲ್ಲೆಯನ್ನು ಎಸ್ಡಿಟಿಯು ಮತ್ತು ಸೋಷಿಯಲ್ ಡೆಮಾಕ್ರೆಟಿಕ್ ಆಟೋ ಚಾಲಕರ ಯೂನಿಯನ್ ದಕ ಜಿಲ್ಲಾ ಸಮಿತಿ ಖಂಡಿಸಿದೆ.
ಕಲ್ಲಾಪುನಲ್ಲಿ ಸುಮಾರು 20 ವರ್ಷಗಳಿಂದ ರಿಕ್ಷಾ ಪಾರ್ಕಿಂಗ್ ಮಾಡಿ ದುಡಿಯುತ್ತಿರುವ ಆಟೋ ಚಾಲಕರಿಗೆ ಇಲ್ಲಿ ಇತ್ತೀಚಿಗೆ ನೂತನವಾಗಿ ನಿರ್ಮಾಣವಾದ ಕಟ್ಟಡ ಮಾಲಕರು ಮತ್ತು ಅವರ ಸಂಬಂಧಿಗಳು ಇಲ್ಲಿನ ರಿಕ್ಷಾ ಪಾರ್ಕ್ ತೆರವುಗೊಳಿಸಬೇಕೆಂದು ಬಲವಂತಪಡಿಸಿ ನಿರಂತರ ದಬ್ಬಾಳಿಕೆ ನಡೆಸುತ್ತಿದ್ದು, ಫೆ 20ರಂದು ಕಟ್ಟಡ ಮಾಲಕರ ಸಂಬಂಧಿಗಳು ರಿಕ್ಷಾ ಚಾಲಕರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಹಲ್ಲೆಗೊಳಗಾದ ವರು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಫೆ. 21 ರಂದು ಇದೇ ವಿಚಾರಕ್ಕೆ ಸಂಬಂಧಿಸಿ ಉಸ್ಮಾನ್ ಕಲ್ಲಾಪು, ಝೆನೂನ್, ಅಬ್ದುಲ್ ಬುಖಾರಿ ಹುಸೈನ್ ಕಲ್ಲಾಪು, ಮಯ್ಯದ್ದಿ ಕಲ್ಲಾಪು ಎಂಬವರ ತಂಡ ರಿಕ್ಷಾ ಚಾಲಕ ಝುಬೈರ್ ಮತ್ತು ಸಾಮಾಜಿಕ ಕಾರ್ಯಕರ್ತ ಲತೀಫ್ ಅವರ ಮೇಲೆ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿದ್ದಾರೆ. ಹಲ್ಲೆಗೊಳಗಾದವರು ತೊಕ್ಕೊಟ್ಟು ಆಸ್ಪತ್ರೆಗೆ ದಾಖಲಾಗಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಹಲ್ಲೆ ಆರೋಪಿಗಳು ರಾಜಾರೋಷವಾಗಿ ತಿರುಗಾಡುತ್ತಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸದೇ ಇದ್ದಲ್ಲಿ ಆಟೋ ಚಾಲಕರು ಮತ್ತು ಸಮಾನ ಮನಸ್ಕ ಸಂಘಟನೆಯೊಂದಿಗೆ ಸೇರಿ ಪ್ರತಿಭಟನೆ ನಡೆಸಲಾಗುವುದು ಎಂದು ಎಸ್ಡಿಟಿಯು ಜಿಲ್ಲಾ ಉಪಾಧ್ಯಕ್ಷ ಸುಲೈಮಾನ್ ಉಸ್ತಾದ್ ಹಾಗೂ ಅಟೋ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಖಾದರ್ ಫರಂಗಿಪೇಟೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.