ಮೂಳೂರು : ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ
ಕಾಪು: ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆಯಿಂದ ದೇಶದ ಶೇ. 68 ಮಂದಿಗೆ ತೊಂದರೆಯಾಗುತ್ತದೆ. ಇದರ ವಿರುದ್ಧ ಭಾರತೀಯರು ಸಂಘಟಿತರಾಗಿ ಹೋರಾಟ ಮಾಡಬೇಕಾಗಹಿದೆ. ದೇಶ ಒಕ್ಕೊರಲಿನಿಂದ ಧ್ವನಿ ಎತ್ತಬೇಕು ಎಂದು ರಾಜ್ಯ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಭಾಸ್ಕರ್ ಪ್ರಸಾದ್ ಕರೆ ನೀಡಿದ್ದಾರೆ.
ಅವರು ರವಿವಾರ ಮೂಳೂರಿನಲ್ಲಿ ಉಡುಪಿ ಜಿಲ್ಲಾ ಯಂಗ್ಮೆನ್ಸ್ ಒಕ್ಕೂಟದ ಆಶ್ರಯದಲ್ಲಿ ಪೌರತ್ವ ಕಾಯ್ದೆ ವಿರುದ್ಧ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.
ಧರ್ಮಾಧಾರಿತವಾದ ಈ ಕಾಯ್ದೆ ದೇಶಕ್ಕೆ ಮತ್ತು ಸಂವಿಧಾನಕ್ಕೆ ಮಾರಕವಾಗಿದೆ. ದೇಶದ ಹೆಚ್ಚಿನ ಜನರಲ್ಲಿ ದಾಖಲೆಗಳು ಇಲ್ಲದೆ ಇರುವುದ ರಿಂದ ನಾಗರಿಕತೆಯ ಹಕ್ಕನ್ನು ಕಿತ್ತು ಹಾಕುವ ಸಂದರ್ಭ ಬರುತ್ತದೆ. ಈ ಬಗ್ಗೆ ಹಳ್ಳಿ ಹಳ್ಳಿಗೆ ತೆರಳಿ ಜನಜಾಗೃತಿ ಮೂಡಿಸಬೇಕಾಗಿದೆ ಎಂದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ದೇಶದಲ್ಲಿ ಆರ್ಥಿಕ ಮುಗ್ಗಟ್ಟು, ನಿರುದ್ಯೋಗ ಸಮಸ್ಯೆ ಅತಿಯಾಗಿದೆ. ಒಂದು ಕಡೆ ಖಾಸಗೀಕರಣದಿಂದ ಉದ್ಯೋಗ ಕಳೆದುಕೊಳ್ಳುವವರ ಸಂಖ್ಯೆಯೂ ಹೆಚ್ಚುತ್ತಿದೆ. ಕೇಂದ್ರ ಸರ್ಕಾರ ತನ್ನ ಇಂತಹ ದುರಾಡಳಿತವನ್ನು ಮುಚ್ಚಿ ಡುವ ಉದ್ದೇಶದಿಂದ ಈ ಕಾಯ್ದೆ ತರುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸಿ ದೇಶದಲ್ಲಿ ಅಸಮಾಧಾನ ಉಂಟು ಮಾಡುತ್ತಿದೆ ಎಂದರು.
ಕೆಪಿಸಿಸಿ ಕಾರ್ಯದರ್ಶಿ ಎಂ.ಎ ಗಫೂರ್ ಮಾತನಾಡಿ ಕೇಂದ್ರ ಸರ್ಕಾರವು ಪ್ರಜೆಗಳ ಹಕ್ಕನ್ನು ದಮನ ಮಾಡುವ ಉದ್ದೇಶದಿಂದ ಇಂತಹ ಮಾರಕ ಕಾಯ್ದೆಗಳನ್ನು ಏಕಾಏಕಿ ಜಾರಿಗೆ ತರುತ್ತಿದೆ. ಇದರ ವಿರುದ್ಧ ಮಾನವ ಸರಪಳಿ ಮಾಡುವ ಮೂಲಕ ಕಾಯ್ದೆಯನ್ನು ಹಿಂದೆಗೆದು ಕೊಳ್ಳುವವರೆಗೆ ನಿರಂತರ ಹೋರಾಟ ನಡೆಸಬೇಕಾಗಿದೆ ಎಂದರು.
ಬಿ.ಕೆ ಇಬ್ರಾಹಿ ಮದನಿ ಮೂಳೂರು ಸಮಾವೇಶವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಝಮೀರ್ ಅಬ್ದುಲ್ ರಹಿಮಾನ್ ವಹಿಸಿದ್ದರು. ಚಿಂತಕಿ ಭವ್ಯ ನರಸಿಂಹ ಮೂರ್ತಿ, ನ್ಯಾಯವಾದಿ ಸುನಿಲ್ ಕುಮಾರ್ ಬಜಾಲ್, ಪ್ರಗತಿಪರ ಚಿಂತಕ ವಿನೋದ್ ಶೆಟ್ಟಿ, ಪತ್ರಕರ್ತ ಚಿಂತನ್ ರಾಜ್, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಎಸ್ಡಿಪಿಐ ರಾಜ್ಯ ಉಪಾಧ್ಯಕ್ಷ ಅಬ್ದುಲ್ ಮಜೀದ್ ಖಾನ್ ಮಾತನಾಡಿದರು.
ಕಾಂಗ್ರೆಸ್ ಮುಖಂಡ ದೇವಿಪ್ರಸಾದ್ ಶೆಟ್ಟಿ ಬೆಳಪು, ಜಿಲ್ಲಾ ಸುನ್ನೀ ಸಂಯುಕ್ತ ಜಮಾತ್ ಅಧ್ಯಕ್ಷ ಅಬೂಬಕ್ಕರ್ ನೇಜಾರ್, ಎಸ್ಎಸ್ಎಫ್ ಪ್ರತಿನಿಧಿ ರಕೀಬ್ ಕನ್ನಂಗಾರ್, ಭಾರತೀಯ ಕ್ರೈಸ್ತ ಒಕ್ಕೂಟದ ಅಧ್ಯಕ್ಷ ಪ್ರಶಾಂತ್ ಜತ್ತನ್ನ, ಸಾಮಾಜಿಕ ಹೋರಾಟಗಾರ ಇಮ್ತಿಯಾಝ್ ಕಾಟಿಪಳ್ಳ, ಮೂಳೂರು ಜುಮ್ಮಾ ಮಸೀದಿ ಅಧ್ಯಕ್ಷ ಎಂ.ಎಚ್.ಬಿ ಮುಹಮ್ಮದ್, ದ.ಕ ಸುನ್ನೀ ಸೆಂಟರ್ ಮ್ಯಾನೇಜರ್ ಮುಸ್ತಫಾ ಸಅದಿ, ಪುರಸಭಾ ಸದಸ್ಯ ಅಬ್ದುಲ್ ಹಮೀದ್ ಅದ್ದು, ಜಿಲ್ಲಾ ಮುಸ್ಲಿಮ್ ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಪಿ ಮೈದಿನಬ್ಬ, ಮುಸ್ಲಿಮ್ ಜಮಾಅತ್ ಜಿಲ್ಲಾ ಕಾರ್ಯದರ್ಶಿ ಸುಬ್ಹಾನ್ ಹೊನ್ನಾಳ, ಮುಸ್ಲಿಂ ಒಕ್ಕೂಟದ ತಾಲೂಕು ಅಧ್ಯಕ್ಷ ಶಬಿ ಅಹ್ಮದ್ ಕಾಝಿ ಉಪಸ್ಥಿರತರಿದ್ದರು.