ಫೆ.27, 28ರಂದು ಮಟ್ಟುಗುಳ್ಳ, ಉಡುಪಿ ಮಲ್ಲಿಗೆ ಬೆಳೆಗಳ ಕುರಿತ ಕಾರ್ಯಾಗಾರ
ಉಡುಪಿ, ಫೆ.24: ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಮೆನೇಜ್ಮೆಂಟ್ ವತಿಯಿಂದ ರಾಜ್ಯ ಸರಕಾರದ ವಿಶ್ವೇಶ್ವರಯ್ಯ ಟ್ರೇಡ್ ಪ್ರೊಮೋಷನ್ ಸೆಂಟರ್ ಇದರ ಸಹಯೋಗದೊಂದಿಗೆ ಉಡುಪಿ ಜಿಲ್ಲೆಯ ಭೌಗೋಳಿಕ ಮಾನ್ಯತೆ ಪಡೆದ ಬೆಳೆಗಳಾದ ಮಟ್ಟುಗುಳ್ಳ ಮತ್ತು ಉಡುಪಿ ಮಲ್ಲಿಗೆಯ ಭವಿಷ್ಯಕ್ಕಾಗಿ ರೂಪುರೇಷೆ ಹಾಗೂ ಸುಸ್ಥಿರ ಅಭಿವೃದ್ಧಿಯ ಕಾರ್ಯತಂತ್ರದ ಕುರಿತ ಕಾರ್ಯಾಗಾರವನ್ನು ಫೆ.27 ಮತ್ತು 28ರಂದು ಹಮ್ಮಿಕೊಳ್ಳಲಾಗಿದೆ.
ಫೆ.27ರಂದು ಅಪರಾಹ್ನ 2 ಗಂಟೆಗೆ ಮಣಿಪಾಲ ಇನಿಸ್ಟಿಟ್ಯೂಟ್ ಆಫ್ ಮೆನೇಜ್ಮೆಂಟ್ನಲ್ಲಿ (ಎಂಐಎಂ) ನಡೆಯುವ ಮಟ್ಟುಗುಳ್ಳ ಕುರಿತ ಕಾರ್ಯಾಗಾರದಲ್ಲಿ ಸೋದೆ ಶ್ರೀವಿಶ್ವವಲ್ಲಭತೀರ್ಥ ಸ್ವಾಮೀಜಿ, ಉಡುಪಿ ಚೇಂಬರ್ ಆಫ್ ಕಾಮರ್ಸ್ನ ಕೃಷ್ಣರಾವ್ ಕೊಡಂಚ, ಮಟ್ಟು ಗುಳ್ಳು ಬೆಳೆಗಾರರ ಸಂಘದ ಅಧ್ಯಕ್ಷ ದಯಾನಂದ ಬಂಗೇರ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಸೆಂಟರ್ ಫಾರ್ ಸೋಶಿಯಲ್ ಎಂಟರ್ಪ್ರಿನರ್ಶಿಪ್ನ ಸಂಯೋಜಕ ಡಾ.ಹರೀಶ್ ಜಿ.ಜೋಶಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಫೆ.28ರಂದು ಮಧ್ಯಾಹ್ನ 2 ಗಂಟೆಗೆ ಶ್ರೀಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮೆನೇಜ್ಮೆಂಟ್ನಲ್ಲಿ ಜರಗುವ ಉಡುಪಿ ಮಲ್ಲಿಗೆ ಕುರಿತ ಕಾರ್ಯಕ್ರಮದಲ್ಲಿ ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಜಿಎಂ ದೇವಾನಂದ ಉಪಾಧ್ಯಾಯ, ಉಡುಪಿ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಬಂಟಕಲ್ ಭಾಗವಹಿಸಲಿರುವರು.
ಈ ಎರಡು ಬೆಳೆಗಳನ್ನು ಇನ್ನಷ್ಟು ವಿಸ್ತರಿಸುವ ಕುರಿತು ಇದರಲ್ಲಿ ಚರ್ಚೆ ನಡೆಸಿ ವರದಿಯನ್ನು ತಯಾರಿಸಲಾಗುವುದು. ಪ್ರಸ್ತುತ ಮಟ್ಟುವಿನಲ್ಲಿ ರುವ 350 ಎಕರೆ ಪ್ರದೇಶದಲ್ಲಿ 201 ಎಕರೆಯಲ್ಲಿ ಮಟ್ಟುಗುಳ್ಳವನ್ನು ಬೆಳೆಸಲಾಗುತ್ತದೆ. ಇಲ್ಲಿಯ ಹೊರತು ಬೇರೆ ಕಡೆ ಈ ಬೆಳೆಯನ್ನು ಬೆಳೆಸಿದರೆ ಆ ರುಚಿ ಬರಲು ಸಾಧ್ಯವಿಲ್ಲ. ಸದ್ಯಕ್ಕೆ ಹಿರಿಯರು ಮಾತ್ರ ಈ ಬೆಳೆಯನ್ನು ಮಾಡುತ್ತಿದ್ದು, ಯುವ ಸಮುದಾಯ ಇದರತ್ತ ಬರುವಂತೆ ಮಾಡುವ ಉದ್ದೇಶ ಇದೆ. ಅದೇ ರೀತಿ ದೇಶದಲ್ಲಿ 1000 ಫಾರ್ಮರ್ ಪ್ರೊಡಕ್ಷನ್ ಆರ್ಗನೈಝೇಶನ್ ಮಾಡಲು ನರ್ಬಾಡ್ ಉದ್ದೇಶಿಸಿದ್ದು, ಅದರಲ್ಲಿ ಉಡುಪಿ ಮಲ್ಲಿಗೆ ಕೂಡ ಒಂದು ಎಂದು ಅವರು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಎಂಐಎಂನ ಪ್ರಾಧ್ಯಾಪಕ ಡಾ.ವರುಣ್ ಕುಮಾರ್, ಸ್ವರ್ಣ್ ಜಿ.ಕಾಂಚನ್ ಉಪಸ್ಥಿತರಿದ್ದರು