ಬಿಪಿಎಲ್ ಪಡಿತರ ಚೀಟಿದಾರರಿಗೆ ಗೋಧಿ, ತೊಗರಿಬೇಳೆ ವಿತರಿಸದೆ ಮೋಸ: ಐವನ್ ಖಂಡನೆ
ಮಂಗಳೂರು, ಎ.1: ಅನ್ನಭಾಗ್ಯ ಯೋಜನೆಯ ಅನ್ವಯ ಬಿಪಿಎಲ್ ಕಾರ್ಡುದಾರರಿಗೆ 7 ಕೆಜಿ ಅಕ್ಕಿಯ ಬದಲು ಕೇವಲ ಐದು ಕೆಜಿ ನೀಡುತ್ತಿದೆ. 2 ಕೆಜಿ ಗೋಧಿ ಜೊತೆಗೆ ತೊಗರಿಬೇಳೆಯನ್ನು ಕಾರ್ಡ್ ಒಂದಕ್ಕೆ 2 ಕೆಜಿ ನೀಡುವುದಾಗಿ ಹೇಳಿಕೆ ನೀಡಿ ಈಗ ಅದನ್ನು ವಿತರಿಸದೆ ಕೇವಲ ಐದು ಕೆಜಿ ಬೆಳ್ತಿಗೆ ಅಕ್ಕಿಯನ್ನು ವಿತರಿಸಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಖಂಡಿಸಿದ್ದಾರೆ.
ಮಂಗಳೂರಿನ ನ್ಯಾಯ ಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ರಾಜ್ಯ ಸರಕಾರವು ನುಡಿದಂತೆ ನಡೆಯದೆ ಜನರ ನಂಬಿಕೆಯನ್ನು ಕಳೆದುಕೊಳ್ಳುತ್ತಿದೆ. ಕೇಂದ್ರ ಸರಕಾರದಿಂದ ಕಿಟ್ ನೀಡಿರುವುದಾಗಿ ಪ್ರಕಟಿಸಿ, ಅದನ್ನು ನೀಡಿಲ್ಲ. ಈಗಾಗಲೇ ಬಿಪಿಎಲ್ ಕಾರ್ಡುದಾರರಿಗೆ ನಿರಾಸೆ ಉಂಟು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಶಾಸಕರಿಗೆ ಉತ್ತರಿಸಿದ ನ್ಯಾಯಬೆಲೆ ಅಂಗಡಿದಾರರು, "ಪಡಿತರರಿಗೆ ಕೇವಲ ಅಕ್ಕಿಯನ್ನು ವಿತರಿಸಲು ಬಗ್ಗೆ ನಮಗೆ ಸೂಚಿಸಲಾಗಿದೆ. ಬೇಳೆ ಮತ್ತು ಗೋಧಿಯ ಬಗ್ಗೆ ಯಾವುದೇ ವಿತರಣೆಗೆ ನೀಡುತ್ತಿಲ್ಲ" ಎಂದು ತಿಳಿಸಿದ್ದಾರೆ.
ಈ ವೇಳೆ ಮಾತನಾಡಿದ ಐವನ್ ಡಿಸೋಜ, ಕೊರೋನ ವೈರಸ್ ನಿಂದ ಉಂಟಾದ ಲಾಕ್ ಡೌನ್ ಗೆ ಜನರು ಸಹಕರಿಸುತ್ತಿದ್ದಾರೆ. ಆದರೆ ರೇಷನ್ ನೀಡುವ ಸಂದರ್ಭದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಕೆಲಸವನ್ನು ಸರಕಾರ ಮಾಡಬೇಕು ಎಂದು ಹೇಳಿದರು.
ಸಂಪೂರ್ಣವಾಗಿ ಲಾಕ್ ಡೌನ್ ಮಾಡಿ ಮೂರು ದಿನಗಳಲ್ಲಿ ಪಡಿತರ ವ್ಯವಸ್ಥೆಗೆ ಅನುಮತಿ ನೀಡಿದ ಕ್ರಮದಿಂದಾಗಿ ಆಕ್ರೋಶಗೊಂಡ ಜನರು ಇಂದಿನಿಂದ ಐದು ಗಂಟೆಗಳ ಕಾಲ ನೀಡಿದ ಅನುಮತಿ ಮತ್ತು ಶಿಸ್ತು ಸೂಚನೆಗಳನ್ನು ಪಾಲನೆ ಮಾಡುವ ಮೂಲಕ ನಾಗರಿಕರು ಪೂರಕವಾಗಿ ಸ್ಪಂದಿಸುತ್ತಿದ್ದಾರೆ ಎಂದು ಐವನ್ ಡಿಸೋಜ ತಿಳಿಸಿದ್ದಾರೆ.