ಫೇಸ್ಬುಕ್ ನಲ್ಲಿ ಕೋಮು ಪ್ರಚೋದನಕಾರಿ ಪೋಸ್ಟ್ : ದೂರು
ಮಂಗಳೂರು, ಎ.6: ಸಾಮಾಜಿಕ ಜಾಲತಾಣ (ಫೇಸ್ಬುಕ್)ದಲ್ಲಿ ಕೋಮುಪ್ರಚೋದನಕಾರಿ ಸಂದೇಶ, ಮುಸ್ಲಿಮರನ್ನು ಮತ್ತು ಪವಿತ್ರ ಗ್ರಂಥ ಕುರ್ಆನ್ ಅನ್ನು ಅವಹೇಳನಗೈದವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ನಗರದ ಪಾಂಡೇಶ್ವರ ನಿವಾಸಿ ಆಸೀಫ್ ಎಂಬವರು ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಾ.29ರಂದು ರಾತ್ರಿ 7:44ಕ್ಕೆ ಫೇಸ್ಬುಕ್ನಲ್ಲಿ ‘ಟ್ರೋಲ್ ಡಕಾಯಿತ 2.0’ ಎಂಬ ಪೇಜ್ನಲ್ಲಿ ‘ಕುರಾನ್ ದೇಶಕ್ಕೆ ಹಿಡಿದ ದರಿದ್ರ, ಕೊರೋನ ವಿಶ್ವಕ್ಕೆ ಹಿಡಿದ ದರಿದ್ರ. ಈ ಎರಡೂ ಮಾನವ ಕುಲಕ್ಕೆ ಹಿಡಿದಿರೋ ಅಷ್ಟದರಿದ್ರಗಳು’ ಎಂಬ ಪೋಸ್ಟ್ ಮಾಡಿದ್ದಲ್ಲದೆ, ಕುರಾನ್ ಮತ್ತು ಕೊರೋನ ಎರಡು ದರಿದ್ರಗಳು ತೊಲಗಿ ಹೋದರೆ ಭಾರತ ಮಾತ್ರ ಅಲ್ಲ ವಿಶ್ವದ ಜೊತೆಗೆ ಸತ್ತಿರೋರಿಗೂ ನೆಮ್ಮದಿ ಇರುತ್ತೆ ಏನಂತಿರಾ ಫ್ರೆಂಡ್ಸ್ ? ಎಂದು ಪ್ರಶ್ನಿಸಲಾಗಿದೆ.
ಇದಕ್ಕೆ ಪೂರಕವಾಗಿ ಸಂತೋಷ್ ಸೂರ್ಯವಂಶಿ ಎಂಬಾತ ಕೆಲವು ಮುಸ್ಲಿಮ್ ವ್ಯಕ್ತಿಗಳ ಫೋಟೋ ಹಾಕಿ ‘ಇದನ್ನು ಎದುರಾಗ ಹೊಡಿಬೇಕು’ ಎಂದು ಕಮೆಂಟ್ ಹಾಕಿದ್ದಾನೆ. ಈ ಕಮೆಂಟನ್ನು 34 ಮಂದಿ ತಮ್ಮ ವೈಯಕ್ತಿಕ ಖಾತೆಗೆ ಹಂಚಿದ್ದಾರೆ. ಇದು ಸಮಾಜದಲ್ಲಿ ಅಶಾಂತಿಗೆ ಕಾರಣವಾಗುವ ಅಪಾಯವಿದೆ. ಹಾಗಾಗಿ ಕುರ್ಆನ್ ಗ್ರಂಥವನ್ನು ಕೊರೋನ ವೈರಸ್ಗೆ ಸಮೀಕರಿಸಿದ, ಹೋಲಿಸಿದ, ಅವಮಾನಿಸಿದ ‘ಟ್ರೋಲ್ ಡಕಾಯಿತ 2.0’ನ ಅಡ್ಮಿನ್ ಮತ್ತು ಸಂತೋಷ್ ಸೂರ್ಯವಂಶಿಯ ವಿರುದ್ಧ ಕ್ರಮ ಜರುಗಿಸಬೇಕು ಎಂದು ದೂರು ನೀಡಿದ್ದರು. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.