ಅದಮಾರು ಮಠ ವತಿಯಿಂದ ಬಡ ಕುಟುಂಬಗಳಿಗೆ ದಿನವಹಿ ಸಾಮಗ್ರಿಗಳ ಕಿಟ್ ವಿತರಣೆ
ಉಡುಪಿ, ಎ.7: ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಅದಮಾರು ಮಠದ ವತಿಯಿಂದ, ಕೊರೋನ ನಿರ್ಬಂಧದಿಂದ ನಿರಾಶ್ರಿತರಾದ ಬಡ ಕುಟುಂಬಗಳಿಗೆ ನೀಡಲಾಗುವ ದಿನವಹಿ ಸಾಮಗ್ರಿಗಳ ಕಿಟ್ಗಳನ್ನು ಪರ್ಯಾಯ ಶ್ರೀ ಈಶಪ್ರಿಯ ತೀರ್ಥರು ಉದ್ಯಾವರ, ಪಡುಬಿದ್ರಿ, ಮಲ್ಪೆ, ಕುಂಜಾರುಗಿರಿ, ಪಡುಬೆಳ್ಳೆ, ಉಡುಪಿ ಜಿಲ್ಲಾ ಯುವಬ್ರಾಹ್ಮಣ ಪರಿಷತ್ ಹಾಗೂ ಮಠದ ಪರಿಸರದ ಸುಮಾರು 500 ಕುಟುಂಬವರಿಗೆ ಮಂಗಳವಾರ ವಿತರಿಸಿದರು.
ನಮ್ಮಲ್ಲಿ ಸರಕಾರದ ವತಿಯಿಂದ ಸಿಗುವ ಸೌಲಭ್ಯ ವಂಚಿತರಾದ ಹಲವಾರು ಕುಟುಂಬಗಳಿದ್ದು, ಇವರನ್ನು ಶ್ರೀ ಕೃಷ್ಣ ಸೇವಾ ಬಳಗದ ಮೂಲಕ ಗುರುತಿಸಿ ಅವಶ್ಯಕ ವಸ್ತುಗಳ ವಿತರಣೆ ಮಾಡುತ್ತಿದ್ದೇವೆ. ಇದ್ದವರಿಗೆ ಕೊಡುವುದಕ್ಕಿಂತ ಏನು ಇಲ್ಲದವರಿಗೆ ದಾನ ಮಾಡಿದರೆ ದೇವರು ಮೆಚ್ಚುವ ಕೆಲಸವಾಗುತ್ತದೆ. ಕೊರೋನ ಸೋಂಕು ಆದಷ್ಟು ಬೇಗ ದೂರವಾಗಿ ನೆಮ್ಮದಿಯಿಂದ ಜನರು ಜೀವನ ಸಾಗಿಸುವಂತಾಗಲಿ ಎಂದು ಅದಾರುಶ್ರೀ ಗಳು ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ನಗರ ಸಭಾ ಸದಸ್ಯ ಯಶಪಾಲ್ ಸುವರ್ಣ, ಪರ್ಯಾಯ ಮಠದ ವ್ಯವಸ್ಥಾಪಕ ಗೋವಿಂದರಾಜ್, ಶ್ರೀಕೃಷ್ಣ ಸೇವಾ ಬಳಗದ ವೈ.ಎನ್.ರಾಮಚಂದ್ರ ರಾವ್, ಪ್ರದೀಪ ರಾವ್, ದಿನೇಶ್ ಪುತ್ರನ್, ಮಾಧವ ಉಪಾಧ್ಯಾಯ, ಸಂತೋಷ ಕುಮಾರ್ ಉದ್ಯಾವರ, ಕುಂಜಾರು ಶ್ರೀ ದುರ್ಗಾದೇವಿ ದೇವಸ್ಥಾನದ ರಾಜೇಂದ್ರ ರಾವ್, ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ತಿನ ಅಧ್ಯಕ್ಷ ವಿಷ್ಣುಪ್ರಸಾದ್ ಪಾಡಿಗಾರ್ ಮೊದಲಾದವರು ಉಪಸ್ಥಿತರಿದ್ದರು.