ಕೋಮು ಪ್ರಚೋದನಕಾರಿ ಭಿತ್ತಿಪತ್ರ ಅಂಟಿಸುವವರ ವಿರುದ್ಧ ಕ್ರಮಕ್ಕೆ ಆಗ್ರಹ
ಮಂಗಳೂರು, ಎ.9: ಮುಸ್ಲಿಮ್ ವ್ಯಾಪಾರಿಗಳ ಗ್ರಾಮಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸುವ ಪ್ರಚೋದನಕಾರಿ ಬಿತ್ತಿಪತ್ರ ಅಂಟಿಸಿದವರನ್ನು ಪೊಲೀಸ್ ಇಲಾಖೆ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಎಸ್ಡಿಪಿಐ ಆಗ್ರಹಿಸಿದೆ.
ಕೊರೋನ ವೈರಸ್ ಹಾವಳಿಯ ವಿರುದ್ಧ ವಿಶ್ವವೇ ಜಾತಿ ಮತ ಭೇದ ಮರೆತು ಹೋರಾಟ ಮಾಡುತ್ತಿದೆ. ಆದರೆ ದೇಶದ ಕೆಲವು ಮಾಧ್ಯಮಗಳು ಮತ್ತು ಬಿಜೆಪಿ ಪಕ್ಷವು ಈ ವೈರಸ್ ಹರಡಲು ಮುಸ್ಲಿಮರೇ ಕಾರಣ ಎಂದು ಬಿಂಬಿಸಲು ವ್ಯವಸ್ಥಿತವಾಗಿ ಪ್ರಯತ್ನಿಸುತ್ತಿದೆ. ದ.ಕ.ಜಿಲ್ಲೆಯ ಪಡೀಲ್ ಸಮೀಪದ ಅಳಪೆ, ತೊಕ್ಕೊಟ್ಟು ಸಮೀಪದ ಕೃಷ್ಣ ನಗರ, ಕೋಲ್ಪೆಮತ್ತಿತರ ಕೆಲವು ಕಡೆಗಳಲ್ಲಿ ಕಿಡಿಗೇಡಿಗಳು ಕೊರೋನ ವೈರಸ್ ಸಂಪೂರ್ಣವಾಗಿ ಹೋಗುವವರೆಗೆ ಮುಸಲ್ಮಾನ ವ್ಯಾಪಾರಿಗೆ ಪ್ರವೇಶವಿಲ್ಲ ಎಂಬ ಪ್ರಚೋದನಕಾರಿ ಭಿತ್ತಿಪತ್ರವನ್ನು ಅಂಟಿಸಿ ಸಮಾಜದ ಸ್ವಾಸ್ಥ್ಯ ಕೆಡಿಸಲು ಪ್ರಯತ್ನ ಪಡುತ್ತಿರುವುದು ಆತಂಕಕಾರಿ ವಿಚಾರವಾಗಿದೆ. ಇಂತಹ ಕಿಡಿಗೇಡಿಗಳನ್ನು ಬಂಧಿಸಲು ವಿಶೇಷ ತಂಡ ರಚಿಸಬೇಕು ಹಾಗೂ ಇವರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಎಸ್ಡಿಪಿಐ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಎಸ್ಎಚ್ ಆಗ್ರಹಿಸಿದ್ದಾರೆ.