ಕೊರೋನ ವೈರಸ್ ನಿಂದ ಸಾವು ವಿಷಾದಕರ: ಶಾಸಕ ಯು.ಟಿ.ಖಾದರ್
ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರು, ಅಕ್ಷರ ದಾಸೋಹದ ಸಿಬ್ಬಂದಿಗೆ ಕಿಟ್ ವಿತರಣೆ
ಬಂಟ್ವಾಳ, ಮೇ 15: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐದು ಮಂದಿ ಕೊರೋನ ಸೊಂಕಿಗೆ ಸಾವನ್ನಪ್ಪಿರುವುದು ವಿಷಾದಕರ. ಇಂತಹ ದುಖಕರ ಘಟನೆಗಳು ಮುಂದಿನ ದಿನಗಳಲ್ಲಿ ಮರುಕಳಿಸದಿರಲಿ ಎಂದು ಮಂಗಳೂರು ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.
ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನ ಸಭಾ ಭವನದಲ್ಲಿ ವೈಯಕ್ತಿಕ ಖರ್ಚಿನಲ್ಲಿ ತುಂಬೆ, ಮೇರೆಮಜಲು, ಪುದು ಮತ್ತು ಕಳ್ಳಿಗೆ ಕ್ಲಸ್ಟರ್ ಮಟ್ಟದ ಅಂಗನವಾಡಿ ಕಾರ್ಯಕರ್ತೆಯರಿಗೆ, ಸಹಾಯಕಿಯರಿಗೆ ಹಾಗೂ ಅಕ್ಷರ ದಾಸೋಹದ ಅಡುಗೆ ಕೆಲಸಗಾರರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದ ಬಳಿಕ ಅವರು ಮಾತನಾಡಿದರು.
ಕೊರೋನ ಸೊಂಕಿನ ಬಗ್ಗೆ ಪ್ರತೀಯೊಬ್ಬರು ಅತ್ಯಂತ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು. ಈ ವೈರಸ್ ಬಗ್ಗೆ ಯಾರಿಗೂ ಭಯ ಬೇಡ. ಆದರೆ ಜಾಗೃತಿ ವಹಿಸುವುದು ಅಗತ್ಯವಾಗಿದೆ. ಎಲ್ಲರೂ ಸೇರಿ ಕೊರೋನ ವಿರುದ್ದ ಹೋರಾಡಬೇಕಾಗಿದೆ. ಈ ಸಂದರ್ಭದಲ್ಲಿ ನಮಗಾಗಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಸೇವಕರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮ್ಮರ್ ಫಾರೂಕ್, ಕೊರೋನ ಸಂಕಷ್ಟದ ಅವಧಿಯಲ್ಲಿ ಸಮಾಜದ ಎಲ್ಲಾ ವರ್ಗದ ಜನರಿಗೆ ಮತ್ತು ಕೊರೊನಾ ವಾರಿಯರ್ಸ್ ಗಳಿಗೆ ಮಂಗಳೂರು ಶಾಸಕ ಯು.ಟಿ.ಖಾದರ್ ಅವರು ವೈಯಕ್ತಿಕ ನೆಲೆಯಲ್ಲಿ ಕಿಟ್ ವಿತರಿಸಿದ್ದಾರೆ. ಸಂಕಷ್ಟದ ಅವಧಿಯಲ್ಲಿ ಯಾರಿಗೂ ತೊಂದರೆ ಯಾಗಬಾರದು ಎಂಬುದೇ ಅವರ ಉದ್ದೇಶವಾಗಿದೆ ಎಂದರು.
ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸೇವಾಂಜಲಿ ಟ್ರಸ್ಟ್ ನ ಸಂಚಾಲಕ ಕೃಷ್ಣ ಕುಮಾರ್ ಪೂಂಜಾ, ಉದ್ಯಮಿ ಮಹಾಬಲ ರೈ, ಗ್ರಾಮ ಪಂಚಾಯತ್ ಸದಸ್ಯರಾದ ಭಾಸ್ಕರ್ ರೈ, ಮುಹಮ್ಮದ್ ಮೋನು ಫರಂಗಿಪೇಟೆ, ಫೈಝಲ್ ಅಮ್ಮೆಮಾರ್, ಮೇರಮಜಲು ಗ್ರಾಪಂ ಮಾಜಿ ಅಧ್ಯಕ್ಷ ವೃಂದ ಪೂಜಾರಿ, ಮುಡಿಪು ಬ್ಲಾಕ್ ಅಧ್ಯಕ್ಷ ಇಮ್ತಿಯಾಝ್ ತುಂಬೆ, ಪುದು ಯುವ ಕಾಂಗ್ರೆಸ್ ಮುಖಂಡ ಮಜೀದ್ ಪೆರಿಮಾರ್, ಸಾಮಾಜಿಕ ಜಾಲತಾಣದ ಮುಖಂಡ ಸಮೀಝ್, ಇಸ್ಮಾಯಿಲ್ ಹತ್ತು ಮೈಲು, ಅಂಗನವಾಡಿ ಮೇಲ್ವಿಚಾರಕಿ ಸುಜಾತಾ, ಅಂಗವಾಡಿ ಕಾರ್ಯಕರ್ತರ ಅಧ್ಯಕ್ಷೆ ರವಿಕಲಾ, ಪಂಚಾಯತ್ ಸದಸ್ಯ ಇಕ್ಬಾಲ್ ಸುಜೀರ್, ಅಶ್ಚದ್ ಫರಂಗಿಪೇಟೆ, ಬಂಟ್ವಾಳ ಪುರಸಭೆ ಸದಸ್ಯ ಜನಾರ್ಧನ್ ಚೆಂಡ್ತಿಮಾರ್ ಉಪಸ್ಥಿತರಿದ್ದರು. ಮೇರೆಮಜಲು ಗ್ರಾಮ ಪಂಚಾಯತ್ ಸದಸ್ಯೆ ವೃಂದಾ ಪೂಜಾರಿ ಸ್ವಾಗತಿಸಿ ವಂದಿಸಿದರು.