ಸೆಲೂನ್ಗಳು ಮಂಗಳವಾರದ ಬದಲು ರವಿವಾರ ಬಂದ್
ಉಡುಪಿ, ಮೇ 23: ರಾಜ್ಯ ಸರಕಾರ ರವಿವಾರ ರಾಜ್ಯಾದ್ಯಂತ ಕಟ್ಟುನಿಟ್ಟಿನ ಲಾಕ್ಡೌನ್ನ್ನು ಘೋಷಿಸಿರುವುದರಿಂದ ಸೆಲೂನ್ಗಳನ್ನೂ ಬಂದ್ ಮಾಡಬೇಕಾಗಿದೆ. ಹೀಗಾಗಿ ಜಿಲ್ಲೆಯ ಎಲ್ಲಾ ಸೆಲೂನ್ಗಳನ್ನು ರವಿವಾರ ಬಂದ್ ಮಾಡಿ, ಮಂಗಳವಾರ ತೆರೆದು ಕೆಲಸ ನಿರ್ವಹಿಸಬಹುದು ಎಂದು ಉಡುಪಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಭಾಸ್ಕ ಭಂಡಾರಿ ಗುಡ್ಡೆ ಅಂಗಡಿ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ ಎಲ್ಲಾ ತಾಲೂಕಿನ ಸವಿತಾ ಸಮಾಜದ ಅಧ್ಯಕ್ಷರೊಂದಿಗೆ ಶುಕ್ರವಾರ ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸವಿತಾ ಸಮಾಜದ ಅಧ್ಯಕ್ಷ ಭಾಸ್ಕರ ಭಂಡಾರಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಮಂಗಳವಾರ ಸಲೂನ್ ತೆರೆದು ರವಿವಾರ ಕಡ್ಡಾಯ ರಜೆ ಘೋಷಿಸುವ ಚಿಂತನೆ ಚರ್ಚೆಯಲ್ಲಿದೆ ಎಂದೂ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎರಡು ತಿಂಗಳು ಲಾಕ್ಡೌನ್ ಕಾರಣ ಸೆಲೂನ್ಗಳು ಬಂದ್ ಆಗಿದ್ದು, ಇದೀಗ ಪುನರಾರಂಭಗೊಂಡ ಎರಡೇ ದಿನಗಳಲ್ಲಿ ಮತ್ತೆ ರವಿವಾರ ಲಾಕ್ಡೌನ್ ನ್ನು ಸರಕಾರ ಘೋಷಿಸಿರುವುದರಿಂದ ಈಗಾಗಲೇ ಸಂಕಷ್ಟದಲ್ಲಿರುವ ಕ್ಷೌರಿಕ ಬಂಧುಗಳು ವಾರದಲ್ಲಿ ಎರಡು ದಿನಗಳ ರಜೆಯಿಂದ ಆರ್ಥಿಕವಾಗಿ ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವ ಸಂಭವವಿರುವುದರಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲು, ಕೋಶಾಧಿಕಾರಿ ಶೇಖರ ಸಾಲಿಯಾನ್ ಆದಿಉಡುಪಿ, ರಾಜ್ಯ ಪ್ರತಿನಿಧಿ ವಿಶ್ವನಾಥ ಭಂಡಾರಿ ನಿಂಜೂರು, ಗೌರವಾಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ, ಸವಿತಾ ಸಹಕಾರಿ ಅಧ್ಯಕ್ಷ ನವಿನ್ಚಂದ್ರ ಭಂಡಾರಿ ಉಪಸ್ಥಿತರಿದ್ದರು.