ಸಿಎಂಗೆ ಪ್ರಮೋದ್ ಮಧ್ವರಾಜ್ ಟ್ವಿಟ್: ಕ್ವಾರಂಟೇನ್ ಅವಧಿ ಮುಗಿದ ಗರ್ಭಿಣಿ ಮನೆಗೆ
ಉಡುಪಿ, ಮೇ 27: ಉಡುಪಿ ಜಿಲ್ಲಾಧಿಕಾರಿ ವಿರುದ್ಧ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಟ್ವೀಟ್ ಮಾಡಿರುವ ಹಿನ್ನೆಲೆಯಲ್ಲಿ ಕ್ವಾರಂಟೇನ್ ಅವಧಿ ಮುಗಿದ ಪಡುಬಿದ್ರೆ ಮೂಲದ ಗರ್ಭಿಣಿ ಮಹಿಳೆಯನ್ನು ಇಂದು ಸಂಜೆ ವೇಳೆ ಕ್ವಾರಂಟೈನ್ನಿಂದ ಬಿಡುಗಡೆಗೊಳಿಸಿ ಮನೆಗೆ ಕಳುಹಿಸಲಾಗಿದೆ.
ದುಬೈಯಿಂದ ಆಗಮಿಸಿದ್ದ ಗರ್ಭಿಣಿ ಮಹಿಳೆಯನ್ನು ಸರಕಾರದ ನಿಯಮ ಗಳಿಗೆ ವಿರುದ್ದವಾಗಿ 15 ದಿನಗಳ ಕ್ವಾರಂಟೈನ್ ಅವಧಿ ಮುಗಿದರೂ ಮನೆಗೆ ಕಳುಹಿಸದೆ ಉಡುಪಿ ಜಿಲ್ಲಾಧಿಕಾರಿಗಳು ಬೇಜವಾಬ್ದಾರಿತನದಿಂದ ನಡೆದು ಕೊಳ್ಳುತ್ತಿದ್ದಾರೆ ಮತ್ತು ಅವರಿಗೆ ಮನೆಯಿಂದ ಬರುತ್ತಿದ್ದ ಆಹಾರವನ್ನು ಕೂಡ ಜಿಲ್ಲಾಡಳಿತ ನಿಲ್ಲಿಸಿದೆ ಎಂಬುದಾಗಿ ಪ್ರಮೋದ್, ಇಂದು ಬೆಳಗ್ಗೆ ಸಿಎಂಗೆ ಟ್ವಿಟ್ ಮಾಡಿದ್ದರು.
ಇದಕ್ಕೆ ಟ್ವಿಟ್ನಲ್ಲಿ ಪ್ರತಿಕ್ರಿಯಿಸಿದ ಉಡುಪಿ ಜಿಲ್ಲಾಡಳಿತ ‘ಇದರಲ್ಲಿ ಬೇಜ ವಾಬ್ದಾರಿಯ ಪ್ರಶ್ನೆಯೇ ಇಲ್ಲ, ಜಿಲ್ಲೆಗೆ 8000 ಮಂದಿ ಹೊರರಾಜ್ಯ ಮತ್ತು ಹೊರದೇಶದಿಂದ ಬಂದಿದ್ದಾರೆ. ಇವರೆಲ್ಲರನ್ನು ಪರೀಕ್ಷೆ ಮಾಡಿ ಬಿಡಬೇಕಾ ಗುತ್ತದೆ. ಆದುದರಿಂದ ದಯವಿಟ್ಟು ಸಹಕರಿಸಬೇಕು. ಈ ಗರ್ಭಿಣಿ ಮಹಿಳೆ ಪ್ರಾಥಮಿಕ ಸಂಪರ್ಕ ಹೊಂದಿದ ಕಾರಣ ಅವರನ್ನು 14 ದಿನಗಳ ನಂತರ ಪರೀಕ್ಷೆ ಮಾಡಿ ಬಿಡಬೇಕಾಗುತ್ತದೆ ಎಂದು ತಿಳಿಸಿದ್ದರು.
ಅಲ್ಲದೆ ಜಿಲ್ಲಾಧಿಕಾರಿ ಪರವಾಗಿ ಟ್ವಿಟ್ನಲ್ಲಿ ಪ್ರತಿಕ್ರಿಯಿಸಿರುವ ಉಡುಪಿ ಶಾಸಕ ಕೆ.ರಘುಪತಿ ಭಟ್, ಪ್ರಮೋದ್ ಆರೋಪವನ್ನು ಟೀಕಿಸಿದ್ದರು. ಈ ಸಂಬಂಧ ಟ್ವಿಟ್ನಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದವು. ಈ ಮಧ್ಯೆ ಸಂಜೆ ವೇಳೆ ಕ್ವಾರಂಟೈನ್ ಅವಧಿ ಮುಗಿದ ಗರ್ಭಿಣಿಯನ್ನು ಬಿಡುಗಡೆ ಗೊಳಿಸಿ ಮನೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ ಪ್ರಮೋದ್ ಮಧ್ವರಾಜ್ ಕೂಡ ಈ ಬಗ್ಗೆ ಟ್ವಿಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.