ಅಂಗರಗುಂಡಿಯ ಮಹಿಳೆ ದಮ್ಮಾಮ್ನಲ್ಲಿ ನಿಧನ
ಮಂಗಳೂರು, ಮೇ 29: ವಿದೇಶಕ್ಕೆ ತೆರಳಿದ್ದ ನಗರ ಹೊರವಲಯದ ಬೈಕಂಪಾಡಿ ನಿವಾಸಿ ಮಹಿಳೆಯೊಬ್ಬರು ಅನಾರೋಗ್ಯದಿಂದ ಗುರುವಾರ ನಿಧನರಾಗಿದ್ದಾರೆ.
ಬೈಕಂಪಾಡಿ ಅಂಗರಗುಂಡಿ ನಿವಾಸಿ ಅಬ್ದುಲ್ ಅಝೀಝ್ ಎಂಬವರ ಪತ್ನಿ ಲತೀಫಾ (55) ಮೃತ ಮಹಿಳೆ. ಇವರು ಸೌದಿ ಅರೇಬಿಯಾದ ದಮ್ಮಾಮ್ನಲ್ಲಿ ಉದ್ಯೋಗದಲ್ಲಿರುವ ಪುತ್ರನೊಂದಿಗೆ ಸ್ವಲ್ಪಕಾಲ ಇರುವ ಉದ್ದೇಶದಿಂದ ತನ್ನ ಪತಿಯೊಂದಿಗೆ ಕಳೆದ ವರ್ಷ ನವೆಂಬರ್ನಲ್ಲಿ ಅಲ್ಲಿಗೆ ತೆರಳಿದ್ದರು. ಇವರು ಎಪ್ರಿಲ್ ನಲ್ಲಿ ಊರಿಗೆ ಹಿಂದಿರುಗಲು ಉದ್ದೇಶಿಸಿದ್ದರೂ, ಲಾಕ್ಡೌನ್ ನಿಂದ ವಿಮಾನ ಸಂಚಾರ ಸ್ಥಗಿತಗೊಂಡಿದ್ದರಿಂದ ಅಲ್ಲಿಯೇ ಉಳಿದಿದ್ದರು.
ಈ ಮಧ್ಯೆ ಲತೀಫಾರಿಗೆ ತೀವ್ರ ಉಸಿರಾಟದ ಸಮಸ್ಯೆ ಉಂಟಾಗಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಸಂಜೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೃತರ ಅಂತ್ಯಕ್ರಿಯೆ ದಮ್ಮಾಮ್ನಲ್ಲೇ ನೆರವೇರಲಿದೆ ಎಂದು ತಿಳಿದುಬಂದಿದೆ.
ಮೃತರು ಪತಿ, ಮೂವರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.