ಮನಪಾದಿಂದ ಜಪ್ಪಿನಮೊಗರು ಬಳಿ ಒತ್ತುವರಿ ತೆರವು
ಮಂಗಳೂರು, ಮೇ 29: ರಾಜಕಾಲುವೆಗಳ ಒತ್ತುವರಿ ವಿರುದ್ಧ ಕಾರ್ಯಾಚರಣೆ ಮುಂದುವರಿಸಿರುವ ಮಂಗಳೂರು ಮಹಾನಗರ ಪಾಲಿಕೆ, ಇಂದು ಮತ್ತೆ ಜಪ್ಪಿನಮೊಗರು ಭಾಗದಲ್ಲಿ ಬುಲ್ಡೋಜರ್ನೊಂದಿಗೆ ಒತ್ತುವರಿ ಕಾರ್ಯಾಚರಣೆ ನಡೆಸಿದೆ.
ಜಪ್ಪಿನಮೊಗರು ಭಾಗದಲ್ಲಿ ರಾಜಕಾಲುವೆ ಒತ್ತುವರಿ ಆಗಿದೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ ಮೇ 26ರಂದು ಮೇಯರ್ ದಿವಾಕರ ಪಾಂಡೇಶ್ವರ ಹಾಗೂ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಅವರ ತಂಡವು ತೆರವು ಕಾರ್ಯಾಚರಣೆ ಆರಂಭಿಸಿತ್ತು. ಇದರ ಮುಂದುವರಿದ ಭಾಗವಾಗಿ ಶುಕ್ರವಾರವೂ ಮೇಯರ್ ದಿವಾಕರ ಪಾಂಡೇಶ್ವರ ಹಾಗೂ ಸ್ಥಳೀಯ ಕಾರ್ಪೊರೇಟರ್ ಉಪಸ್ಥಿತಿಯಲ್ಲಿ ಒತ್ತುವರಿ ತೆರವು ಕಾರ್ಯ ನಡೆದಿದೆ.
ಮಂಗಳೂರಿನಿಂದ ತೊಕ್ಕೊಟು ಸಾಗುವಾಗ ಜಪ್ಪಿನಮೊಗರು ಭಾಗದ ಹೆದ್ದಾರಿಯ ಎಡಭಾಗದಲ್ಲಿ ಕೆಲವರು ರಾಜಕಾಲುವೆಯನ್ನು ಒತ್ತುವರಿ ಮಾಡಿದ ಬಗ್ಗೆ ಸ್ಥಳೀಯರ ದೂರಿನ ಮೇರೆಗೆ ಮೇಯರ್ ಹಾಗೂ ಅಧಿಕಾರಿಗಳ ತಂಡ ಭೆೀಟಿ ನೀಡಿ ತೆರವುಗೊಳಿಸಿದೆ.
‘‘ಜಪ್ಪಿನಮೊಗರು ಪರಿಸರದಲ್ಲಿ ಇಂದು ಕೂಡಾ ರಾಜಕಾಲುವೆ ಒತ್ತುವರಿ ತೆರವು ಮಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಹಾದು ಹೋಗಿ ರುವ ರಾಜಕಾಲುವೆಯನ್ನು ಖಾಸಗಿ ಶೋ ರೂಂ ಮತ್ತು ಶಾಲೆಗಳು ಒತ್ತುವರಿ ಮಾಡಿಕೊಂಡಿದ್ದು, ಇಂದು ಮನಪಾ ಅಧಿಕಾರಿಗಳ ನೇತೃತ್ವದಲ್ಲಿ ಅನಧಿಕೃತವಾಗಿ ಒತ್ತುವಾರಿಯಾದ ರಸ್ತೆ ತೆರವು ಮಾಡಲಾಗಿದೆ. ನಗರದಲ್ಲಿ ಯಾವುದೇ ಅನಧಿಕೃತ ಒತ್ತುವರಿ ಆಗಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳ ಲಾಗುವುದು’’ ಎಂದು ಮೇಯರ್ ದಿವಾಕ ಪಾಂಡೇಶ್ವರ ಎಚ್ಚರಿಕೆ ನೀಡಿದ್ದಾರೆ.