‘ಕಲ್ಲುಕೋರೆ ಬಳಿ ಅವಘಡ ಸಂಭವಿಸಿದಲ್ಲಿ ಮಾಲಕರ ವಿರುದ್ದ ಕ್ರಿಮಿನಲ್ ಮೊಕದ್ದಮೆ’
ಉಡುಪಿ, ಮೇ 30: ಜಿಲ್ಲೆಯಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಕಲ್ಲು ಗಣಿ ಗುತ್ತಿಗೆದಾರರಿಗೆ ಹಾಗೂ ಈಗಾಗಲೇ ಅವಧಿ ಮುಗಿದಿರುವ ಈ ಹಿಂದೆ ನಿರ್ವಹಿಸಿದ ಕಲ್ಲು ಗಣಿ ಗುತ್ತಿಗೆದಾರರಿಗೂ, ಕಲ್ಲು ಕೋರೆಗಳ ಸುತ್ತಲೂ ತಂತಿ ಬೇಲಿ ಅಳವಡಿಸಿ ಅಪಾಯ ಪ್ರದೇಶ ಎಂಬ ಎಚ್ಚರಿಕೆಯ ಸೂಚನಾ ಫಲಕವನ್ನು ಅಳಡಿಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ವತಿಯಿಂದ ಸೂಚಿಸಲಾಗಿದೆ.
ಆದರೂ ಚಾಲ್ತಿ/ಅವಧಿ ಮುಗಿದಿರುವ ಕಲ್ಲು ಗಣಿ ಗುತ್ತಿಗೆ ಪ್ರದೇಶಗಳಲ್ಲಿ ಯಾವುದೇ ಅವಘಡ ಸಂಭವಿಸಿದಲ್ಲಿ ಸಂಬಂಧಿಸಿದ ಗುತ್ತಿಗೆದಾರರು/ಪಟ್ಟಾ ಮಾಲಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.
ಮಳೆಗಾಲದಲ್ಲಿ ಜಿಲ್ಲೆಯ ಕಲ್ಲು ಕೋರೆಗಳು ಹಾಗೂ ಈ ಹಿಂದೆ ನಿರ್ವಹಿಸಿದ ಕಲ್ಲುಕೋರೆ ಗುಂಡಿಗಳಲ್ಲಿ ನೀರು ಸಂಗ್ರಹವಾಗುವುದು ಸಹಜವಾಗಿರು ತ್ತದೆ. ಆದ್ದರಿಂದ ನೀರು ತುಂಬಿರುವ ಕಲ್ಲು ಕೋರೆ ಗುಂಡಿಗಳ ಬಳಿ ಮಹಿಳೆಯರು, ಮಕ್ಕಳು ಮತ್ತು ಸಾರ್ವಜನಿಕರು ತೆರಳದೇ ಜಾಗ್ರತೆ ವಹಿಸುವಂತೆ ಜಿಲ್ಲಾ ಗಣಿ ಮತ್ತು ಭೂಜ್ಞಾನ ಇಲಾಖೆಯ ಹಿರಿಯ ಭೂಜ್ಞಾನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.