ಉಡುಪಿ ನಗರದಲ್ಲಿನ ಉಚಿತ ಸಿಟಿಬಸ್ ಸೇವೆ ಸಮಾಪನ
ಉಡುಪಿ, ಮೇ 31: ಕಡಿಯಾಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವತಿಯಿಂದ ನಗರಸಭಾ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳ ಸಹಕಾರದಲ್ಲಿ ಉಡುಪಿ ನಗರದಲ್ಲಿ ಒಂದು ವಾರಗಳ ಹಮ್ಮಿಕೊಳ್ಳಲಾದ ಉಚಿತ ಸಿಟಿಬಸ್ ಸೇವೆಯ ರವಿವಾರ ಸಮಾಪ್ತಿಗೊಂಡಿತು.
ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ನಡೆದ ಈ ಸೇವೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಉಡುಪಿ ಶಾಸಕ ಕೆ.ರಘುಪತಿ ಭಟ್, ವಿಶ್ವವನ್ನೇ ತಲ್ಲಣಗೊಳಿಸಿದ ಕೊರೋನಾ ಮಾಹಾಮಾರಿ ಜೀವನದ ಹಲವು ಪಾಠಗಳನ್ನು ಹೇಳಿಕೊಟ್ಟಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಈ ಉಚಿತ ಬಸ್ ಸೇವೆಯಲ್ಲಿ ಸ್ವಯಂ ಸೇವಕರಾಗಿ ತೊಡಗಿಸಿಕೊಂಡ ನಗರ ಸಭಾ ಸದಸ್ಯರು, ಜಿಪಂ ಅಧ್ಯಕ್ಷರು, ಉದ್ಯಮಿಗಳು, ಕಾರ್ಯಕರ್ತರು, ಬಸ್ ಮಾಲಕರಿಗೆ ಕೃತಜ್ಞತೆ ಸಲ್ಲಿಸಲಾಯಿತು. ನಂತರ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಬಿಜೆಪಿ ನಗರಾಧ್ಯಕ್ಷ ಮಹೇಶ್ ಠಾಕೂರ್, ಮೀನುಗಾರಿಕಾ ಫೆಡರೇಷನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ, ನಗರಸಭಾ ಸದಸ್ಯ ರಾದ ಗಿರೀಶ್ ಅಂಚನ್, ಬಾಲಕೃಷ್ಣ ಶೆಟ್ಟಿ, ಮಂಜುನಾಥ್ ಮಣಿಪಾಲ, ಯೋಗೀಶ್ ಸಾಲ್ಯಾನ್, ಸುಂದರ ಕಲ್ಮಾಡಿ, ಟಿ.ಜಿ.ಹೆಗ್ಡೆ, ಅಶೋಕ್ ನಾಯ್ಕ್, ಸಂತೋಷ್ ಜತ್ತನ್ನ, ರಜನಿ ಹೆಬ್ಬಾರ್ ಮೊದಲಾದವರು ಉಪಸ್ಥಿತರಿದ್ದರು.