ದ.ಕ. ಜಿಲ್ಲೆಯಲ್ಲಿ ಶುಕ್ರವಾರ ಎಂಟು ಮಂದಿಗೆ ಕೊರೋನ ಸೋಂಕು ದೃಢ: ಸೋಂಕಿತರ ಸಂಖ್ಯೆ 151ಕ್ಕೆ ಏರಿಕೆ
ಮಂಗಳೂರು, ಜೂ.4: ದ.ಕ. ಜಿಲ್ಲೆಯಲ್ಲಿ ಶುಕ್ರವಾರ ಬಂದ 100 ಗಂಟಲ ದ್ರವ ಮಾದರಿ ವರದಿಯ ಪೈಕಿ ಎಂಟು ಪ್ರಕರಣಗಳು ಪಾಸಿಟಿವ್ ಬಂದಿದ್ದು, 92 ವರದಿಗಳು ನೆಗೆಟಿವ್ ಬಂದಿವೆ. ಸೋಂಕಿತರು ಮುಂಬೈನಿಂದ ಬಂದವರಾಗಿದ್ದಾರೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 151ಕ್ಕೇರಿದೆ.
ಮೇ 12, 13, 14, 19ರಂದು ಮುಂಬೈನಿಂದ ಎಂಟು ಮಂದಿಯನ್ನು ಉಡುಪಿ ಜಿಲ್ಲೆಯಲ್ಲಿ ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು. ಕ್ವಾರಂಟೈನ್ ಅವಧಿ ಮುಕ್ತಾಯಗೊಂಡ ನಂತರ ಮಂಗಳೂರಿಗೆ ವಾಪಸಾಗಿದ್ದರು. ಇವರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಇವರನ್ನು ವೆನ್ಲಾಕ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ವೆನ್ಲಾಕ್ ಜಿಲ್ಲಾಸ್ಪತ್ರೆಯಿಂದ 12 ಮಂದಿ ಗುಣಮುಖರಾಗಿದ್ದು, ಒಟ್ಟು 88 ಮಂದಿ ಮನೆಗೆ ತೆರಳಿದ್ದಾರೆ. ಇನ್ನು 50 ವರದಿಗಳು ಬರುವುದು ಬಾಕಿ ಇದೆ. ಆಸ್ಪತ್ರೆಯಲ್ಲಿ ಇನ್ನು 56 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲ ರೋಗಿಗಳ ಆರೋಗ್ಯ ಸ್ಥಿತಿ ತೃಪ್ತಿದಾಯಕವಾಗಿದೆ. ಶುಕ್ರವಾರ 84 ಸ್ಯಾಂಪಲ್ಗಳನ್ನು ಲ್ಯಾಬ್ಗೆ ಕಳುಹಿಸಿ ಕೊಡಲಾಗಿದೆ. ಇಲ್ಲಿಯವರೆಗೆ ಏಳು ಮಂದಿ ಮೃತಪಟ್ಟಿದ್ದಾರೆ.