ಉಡುಪಿ ಜಿಲ್ಲೆಯಲ್ಲಿ ಒಂದೇ ದಿನ 83 ಪ್ರದೇಶಗಳು ಸೀಲ್ಡೌನ್
ಬೈಂದೂರಿನಲ್ಲಿ 93 ಸಹಿತ ಒಟ್ಟು 201 ಕಂಟೇನ್ಮೆಂಟ್ ವಲಯಗಳು
ಉಡುಪಿ, ಜೂ.5: ಉಡುಪಿ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಇಂದು ಒಂದೇ ದಿನದಲ್ಲಿ ಒಟ್ಟು 83 ಪ್ರದೇಶಗಳನ್ನು ಕಂಟೇನ್ ಮೆಂಟ್ ರೆನ್ ಎಂಬುದಾಗಿ ಘೋಷಿಸಿ ಸೀಲ್ಡೌನ್ ಮಾಡಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಒಟ್ಟು 201 ಪ್ರದೇಶಗಳನ್ನು ಸೀಲ್ಡೌನ್ ಮಾಡಿ ಕ್ರಮಕೈಗೊಳ್ಳಲಾಗಿದೆ.
ಬೈಂದೂರು ತಾಲೂಕಿನ ಶಿರೂರು ಗ್ರಾಮದ 11, ಬಡಾಕೆರೆ- 1, ಮುದೂರು-1, ಯಡ್ತರೆ- 2, ಬಿಜೂರು-6, ಮರವಂತೆ-4, ಕಂಬದಕೋಣೆ -10, ತೆಗ್ಗರ್ಸೆ- 5, ಕಿರಿಮಂಜೇಶ್ವರ ಗ್ರಾಮದ 5 ಪ್ರದೇಶಗಳು ಸೇರಿದಂತೆ ಒಂದೇ ದಿನ 45 ಪ್ರದೇಶಗಳನ್ನು ಸೀಲ್ಡೌನ್ ಮಾಡಲಾಗಿದೆ. ಈ ಮೂಲಕ ತಾಲೂಕಿನಲ್ಲಿ ಒಟ್ಟು 93 ಪ್ರದೇಶಗಳು ಕಂಟೇನ್ಮೆಂಟ್ ವಲಯಗಳಾಗಿವೆ.
ಬ್ರಹ್ಮಾವರ ತಾಲೂಕಿನ ವಡ್ಡರ್ಸೆ ಗ್ರಾಮದ ಮಧುವನ ಮತ್ತು ನಡೂರು ಗ್ರಾಮದ ಮೂಡಬೆಟ್ಟು ಎಂಬಲ್ಲಿ ಕಂಟೇನ್ಮೆಂಟ್ ವಲಯವನ್ನಾಗಿ ಘೋಷಿಸಿ, ಸೋಂಕಿತರ ಮನೆ ಸಹಿತ ತಲಾ ಎರಡು ಮನೆಗಳನ್ನು ಸೀಲ್ಡೌನ್ ಮಾಡಲಾಗಿದೆ. ಬ್ರಹ್ಮಾವರ ತಾಲೂಕಿನಲ್ಲಿ ಈವರೆಗೆ ಒಟ್ಟು 11 ಪ್ರದೇಶಗಳನ್ನು ಸೀಲ್ಡೌನ್ ಮಾಡಲಾಗಿದೆ.
ಉಡುಪಿ ತಾಲೂಕಿನ ಪೆರ್ಡೂರು ಗ್ರಾಮದಲ್ಲಿ ಎರಡು, ಬೊಮ್ಮರಬೆಟ್ಟು ಗ್ರಾಮದಲ್ಲಿ ಮೂರು, ಮೂಡನಿಡಂಬೂರು ಮತ್ತು ಮಲ್ಪೆಯಲ್ಲಿ ತಲಾ ಒಂದು ಪ್ರದೇಶಗಳನ್ನು ಸೀಲ್ಡೌನ್ ಮಾಡಲಾಗಿದೆ. ತಾಲೂಕಿನಲ್ಲಿ ಈವರೆಗೆ ಒಟ್ಟು 14 ಕಡೆಗಳಲ್ಲಿ ಕಂಟೇನ್ಮೆಂಟ್ ವಲಯ ಎಂಬುದಾಗಿ ಘೋಷಿಸಲಾಗಿದೆ.
ಕಾಪು ತಾಲೂಕಿನ ಶಿರ್ವ ಗ್ರಾಮದ ಮಾಣಿಬೆಟ್ಟು, ಸೊಂಪು, ಹಟ್ಟಿಂಜೆ, ಎಡ್ಮೇರ್, ನಾಯ್ಡಟ್ಟು ಒಟ್ಟು 5 ಕಡೆಗಳಲ್ಲಿ ಹಾಗೂ ಮುದರಂಗಡಿ ಮತ್ತು ಉಚ್ಚಿಲ ಗ್ರಾಮದಲ್ಲಿ ತಲಾ ಒಂದು ಪ್ರದೇಶದಲ್ಲಿ ಕಂಟೇನ್ಮೆಂಟ್ ವಲಯ ವನ್ನಾಗಿ ಮಾಡಿ ಸೀಲ್ಡೌನ್ ಮಾಡಲಾಗಿದೆ. ಹೀಗೆ ತಾಲೂಕಿನಲ್ಲಿ ಈವರೆಗೆ ಒಟ್ಟು 14 ಪ್ರದೇಶಗಳನ್ನು ಸಿೀಲ್ಡೌನ್ ಮಾಡಲಾಗಿದೆ.
ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮದ ಎರಡು ಪ್ರತ್ಯೇಕ ಪ್ರದೇಶ ಮತ್ತು ಹೆಬ್ರಿ ಗ್ರಾಮದ ತೇಲಂಜೆ ಎಂಬಲ್ಲಿ ಒಂದು ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿದೆ. ಹೆಬ್ರಿ ತಾಲೂಕಿನಲ್ಲಿ ಈವರೆಗೆ ಒಟ್ಟು ನಾಲ್ಕು ಕಡೆಗಳಲ್ಲಿ ಕಂಟೇನ್ ಮೆಂಟ್ ವಲಯ ಎಂಬುದಾಗಿ ಘೋಷಿಸಲಾಗಿದೆ.
ಕಾರ್ಕಳ ತಾಲೂಕಿನ ಎರ್ಲಪಾಡಿ ಮತ್ತು ಮಿಯ್ಯರು ಗ್ರಾಮಗಳಲ್ಲಿ ತಲಾ ಎರಡು, ಹಿರ್ಗಾನ, ಮಾಳ, ಪಳ್ಳಿ, ಬೈಲೂರು, ಕಣಜಾರು, ರೆಂಜಾಳ, ಇರ್ವತ್ತೂರು ಗ್ರಾಮದ ತಲಾ ಒಂದು ಸೇರಿದಂತೆ ಇಂದು ಒಟ್ಟು 11 ಪ್ರದೇಶ ಗಳಲ್ಲಿ ಕಂಟೇನ್ಮೆಂಟ್ ವಲಯವನ್ನು ಘೋಷಿಸಿ ಸೀಲ್ಡೌನ್ ಮಾಡಲಾಗಿದೆ. ತಾಲೂಕಿನಲ್ಲಿ ಈವರೆಗೆ ಒಟ್ಟು 24 ಕಡೆಗಳಲ್ಲಿ ಸೀಲ್ಡೌನ್ ಮಾಡಿ ಆದೇಶ ಹೊರಡಿಸಲಾಗಿದೆ.
ಕುಂದಾಪುರ ತಾಲೂಕಿನ ಗುಲ್ವಾಡಿ ಗ್ರಾಮದಲ್ಲಿ ಎರಡು, ತ್ರಾಸಿ, ವಂಡ್ಸೆ, ಚಿತ್ತೂರು, ಕೆಂಚನೂರು, ಕಾವ್ರಾಡಿ, ಹೊಸಂಗಡಿ ಗ್ರಾಮಗಳ ತಲಾ ಒಂದರಂತೆ ಒಟ್ಟು ಎಂಟು ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿದೆ. ಕುಂದಾಪುರ ತಾಲೂಕಿನಲ್ಲಿ ಈವರೆಗೆ ಒಟ್ಟು 41 ಪ್ರದೇಶಗಳನ್ನು ಕಂಟೇನ್ಮೆಂಟ್ ವಲಯ ವನ್ನಾಗಿ ಘೋಷಿಸಲಾಗಿದೆ ಎಂದು ಆಯಾ ತಾಲೂಕಿನ ತಶೀಲ್ದಾರರು ಮಾಹಿತಿ ನೀಡಿದರು.
ಬ್ರಹ್ಮಾವರ ಠಾಣಾ ಹೋಮ್ಗಾರ್ಡ್ಗೆ ಪಾಸಿಟಿವ್
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವರ್ಡ್ಡಸೆ ಗ್ರಾಮದ ಮಧುವನದ ಹೋಮ್ಗಾರ್ಡ್ ಒಬ್ಬರಿಗೆ ಕೊರೋನ ಪಾಸಿಟಿವ್ ಇರುವುದು ಇಂದು ದೃಢಪಟ್ಟಿದೆ.
ಇವರು ಸಾಸ್ತಾನ ಚೆಕ್ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸಿದ್ದರೆನ್ನಲಾಗಿದೆ. ಕಳೆದ ಹಲವು ದಿನಗಳಿಂದ ಇವರು ಠಾಣೆಯ ಕರ್ತವ್ಯಕ್ಕೆ ಹಾಜರಾಗಿಲ್ಲ ಎನ್ನಲಾಗಿದೆ. ಸದ್ಯ ಕ್ವಾರೇಂಟ್ನಲ್ಲಿರುವ ಬ್ರಹ್ಮಾವರ ಎಸ್ಸೈ ಸಹಿತ ಒಟ್ಟು 35 ಮಂದಿ ಪೊಲೀಸರು ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜೂ.7ರಂದು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಅದೇ ದಿನ ಠಾಣೆಯನ್ನು ಸ್ಯಾನಿಟೈಸ್ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.